ತುಂಗಭದ್ರಾ ನದಿ ಪ್ರವಾಹ, ಬಳ್ಳಾರಿಯಲ್ಲಿ ರೈತರಿಗೆ ಭಾರಿ ನಷ್ಟ
ಬಳ್ಳಾರಿ, ಆಗಸ್ಟ್ 24 : ತುಂಗಭದ್ರಾ ನದಿ ಉಕ್ಕಿ ಹರಿದ ನಂತರ ಹೊಲಗದ್ದೆಗಳಲ್ಲಿ ಹರಿದ ನೀರು ರೈತರಲ್ಲಿ ತೀವ್ರವಾದ ಆತಂಕ ಮೂಡಿಸಿದೆ. ರೈತರು ಕೃಷಿಯನ್ನು ಪುನರ್ ಪ್ರಾರಂಭಿಸಲು ಹೆಣಗಾಡುವಂತೆ ಮಾಡುತ್ತಿದೆ. ಅತಿವೃಷ್ಟಿಯ ಕಾರಣ ಬೆಳೆ ನಷ್ಟ ಹೊಂದಿರುವ ಕೃಷಿಕರು ತೀವ್ರ ಆತಂಕದಲ್ಲೇ ಭವಿಷ್ಯವನ್ನು ಹುಡುಕಾಡುತ್ತಿದ್ದಾರೆ.
ತುಂಗಭದ್ರಾ ನದಿಯ ಪ್ರಾತ್ರದಲ್ಲಿ ಬರುವ ಕಂಪ್ಲಿ, ಮಣ್ಣೂರು, ಸೂಗೂರು, ಸಿರುಗುಪ್ಪ ಸೇರಿದಂತೆ 75ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಭತ್ತದ ಸಸಿಯನ್ನು ನಾಟಿ ಮಾಡಲಾಗಿತ್ತು. ನೀರು ಉಕ್ಕಿ ಹರಿದ ನಂತರ ಐದು ದಿನಗಳ ಕಾಲ ಸಸಿ ನೀರಿನಲ್ಲಿ ಮುಳುಗಿಹೋಗಿತ್ತು. ಆದ್ದರಿಂದ, ರೈತರು ಭತ್ತದ ಬೆಳೆಯನ್ನು ಹೊಸದಾಗಿ ನಾಟಿ ಮಾಡಬೇಕಾಗಿದೆ.
ಪ್ರವಾಹದ ಅಘಾತದಿಂದ ಅನ್ನದಾತ ಹೊರಬಂದಿಲ್ಲ..!
ತುಂಗಭದ್ರಾ ನದಿ ದಂಡೆಯಲ್ಲಿರುವ ಸಿರುಗುಪ್ಪ ತಾಲೂಕಿನ ಎಂ.ಸೂಗೂರು, ಮಣ್ಣೂರು, ರುದ್ರಪಾದ, ನಡಿವಿ, ಹೆರಕಲ್ಲು, ಕೆಂಚನಗುಡ್ಡ, ನಿಟ್ಟೂರು, ದೇಶನೂರು, ಬಾಗೇವಾಡಿ, ಹಚ್ಚೊಳ್ಳಿ, ಶ್ರೀಧರಗಡ್ಡೆ, ಹೊನ್ನಾರಹಳ್ಳಿ, ಚಿಕ್ಕಬಳ್ಳಾರಿ, ಟಿ.ಎಸ್.ಕೂಡ್ಲೂರು, ಮಾಟೂರು ಮುಂತಾದ ಗ್ರಾಮಗಳ ಅಂದಾಜು 1,300 ಹೆಕ್ಟೇರ್ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಬೆಳೆಗಳು ಹಾಳಾಗಿವೆ.
ಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರ
ನದಿ ಪಾತ್ರದಲ್ಲಿ ಸುಮಾರು 2500ಸಾವಿರ ಪಂಪಸೆಟ್ಗಳಿದ್ದು ಇದರಲ್ಲಿ ಬಹುತೇಕ ಪಂಪಸೆಟ್ಗಳು ನದಿ ನೀರಿನಲ್ಲಿ ಮುಳುಗಿದ್ದು ಸದ್ಯ ನೀರಿನಲ್ಲಿ ಮುಳುಗಿರುವ ಪಂಪಸೆಟ್ಗಳನ್ನು ರೈತರು ರಿಪೇರಿಗಾಗಿ ಅಲ್ಲಿಂದ ತೆರವು ಮಾಡುವ ಕಾರ್ಯ ನದಿ ದಂಡೆಯಲ್ಲಿ ಸಾಮಾನ್ಯವಾಗಿದೆ.
ತಾಲೂಕಿನ ನಿಟ್ಟೂರು ಗ್ರಾಮದ ರೈತರ ಹೊಲಗಳಿಗೆ ನದಿ ನೀರು ನುಗ್ಗಿದ ಪರಿಣಾಮ ನದಿಯ ಜಲಸಸ್ಯ ಮತ್ತು ಮರುಳು ತುಂಬಿಕೊಂಡಿದ್ದು ಭತ್ತದ ಬೆಳೆಯು ಸಂಪೂರ್ಣವಾಗಿ ಹಾಳಾಗಿದೆ. ಅಷ್ಟೇ ಅಲ್ಲದೆ ನದಿ ಪಕ್ಕದಲ್ಲಿದ್ದ ಪಂಪಸೆಟ್ಗಳಿಗೆ ಅಳವಡಿಸಿದ ಪೈಪ್ಗಳು ನದಿ ನೀರಿನೊಂದಿಗೆ ಕೊಚ್ಚಿ ಹೋಗಿವೆ.
'ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದರಿಂದ ತಾಲೂಕಿನ ನದಿ ದಂಡೆಯಲ್ಲಿ ಬರುವ 14ಗ್ರಾಮಗಳ ರೈತರು ನದಿ ದಂಡೆಯಲ್ಲಿ ಬೆಳೆದಿರುವ ಭತ್ತ, ಕಬ್ಬು, ಇನ್ನಿತರೆ ಬೆಳೆಗಳು ನೀರಿನಲ್ಲಿ ಮುಳುಗಿದ್ದರಿಂದ ಬೆಳೆಯು ಹಾಳಾಗಿದ್ದು, ಸುಮಾರು 1300 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬೆಳೆಯ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ' ಎಂದು ತಹಶೀಲ್ದಾರ್ ಎಂ.ಸುನಿತಾ ಹೇಳಿದ್ದಾರೆ.