ಹೊಸಪೇಟೆಯಲ್ಲಿ ಕೋವಿಡ್19 ಟೆಸ್ಟ್ ಕೇಂದ್ರ ಸ್ಥಾಪಿಸಲು ಆಗ್ರಹ
ಹಗರಿಬೊಮ್ಮನಹಳ್ಳಿ, ಮಾರ್ಚ್ 21: ಪ್ರಧಾನಿ ಮೋದಿ ಹೇಳಿದಂತೆ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಬದಲು ಬಳ್ಳಾರಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗೆ ಮಧ್ಯವಿರುವ ಹತ್ತಕ್ಕೂ ಹೆಚ್ಚು ದೊಡ್ಡ ಕಾರ್ಖಾನೆಗಳಿಗೆ ಹತ್ತಿರವಿರುವ ಹೊಸಪೇಟೆಯಲ್ಲಿ ಕೋರೋನಾ ಸೋಂಕು ಮಾದರಿ ಪರೀಕ್ಷಾ ಕೇಂದ್ರ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷಣ ಸವದಿ ಹಾಗೂ ಬಳ್ಳಾರಿ ಜಿಲ್ಲೆಯ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಅರಣ್ಯ ಸಚಿವ ಆನಂದಸಿಂಗ್ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕೋರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ರಕ್ತದ ಮಾದರಿ ತಪಾಸಣೆಗೆ ಬೆಂಗಳೂರಿಗೆ ಹೋಗಿ ಬರಲು ವಿಳಂಬವಾಗುವ ಕಾರಣ ತಕ್ಷಣವೇ ಆರೋಗ್ಯ ಇಲಾಖೆಯು ಹೊಸಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋರೋನಾ ಸೋಂಕು ಮಾದರಿ ಪರೀಕ್ಷಾ ಕೇಂದ್ರ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಜನತೆ ಸೋಂಕಿಗೆ ಹೆದರಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಪರದಾಡುವಂತಾಗಿದ್ದು ಕೇರಳ ಮಾದರಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳಬೇಕು ಜೊತೆಗೆ ಸಣ್ಣ ಮತ್ತು ಮಧ್ಯಮ ಉದ್ಯಮ ಮತ್ತು ಕಾರ್ಖಾನೆಗಳು, ಲಾರಿ ಮಾಲೀಕರು ದಿನಗೂಲಿ ನೌಕರರಿಗೆ ಮತ್ತು ಚಾಲಕರಿಗೆ ವೇತನದಲ್ಲಿ ಕಡಿತ ಮಾಡದಂತೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.

ಕೋರೋನಾ ಸೋಂಕಿಗೆ ಹೆದರಿ ಮಹಾನಗರಗಳಲ್ಲಿ ವಾಸವಿದ್ದ ಜನತೆ ಹಳ್ಳಿಗಳಿಗೆ ವಲಸೆ ಬರುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಬಗ್ಗೆ ಭಯಭೀತ ವಾತಾವರಣ ಸೃಷ್ಟಿಯಾಗಿದ್ದು ಪಟ್ಟಣದಿಂದ ಬಂದವರನ್ನು ಅಸ್ಪೃಶ್ಯರ ತರ ನೋಡಲಾಗುತ್ತಿದ್ದು ಜಾಗೃತಿ ಮೂಡಿಸಲು ಅಧಿಕಾರಿಗಳ ತಂಡ ರಚಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಕಾಂಗ್ರೆಸ್ ವಕ್ತಾರ ಪತ್ರೇಶ್ ಆಗ್ರಹಿಸಿದರು.












Click it and Unblock the Notifications