ಹಗರಿಬೊಮ್ಮನಹಳ್ಳಿ ಗಲಾಟೆ; ಶಾಸಕ ಭೀಮಾನಾಯ್ಕ ಸ್ಪಷ್ಟನೆ
ಬಳ್ಳಾರಿ, ನವೆಂಬರ್ 09 : ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ದಿನ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಶಾಸಕ ಭೀಮಾನಾಯ್ಕ ತೋಳು ತಟ್ಟಿ ಸವಾಲು ಹಾಕಿದ ವಿಡಿಯೋಗಳು ವೈರಲ್ ಆಗಿವೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಈ ಕುರಿತು ಸೋಮವಾರ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. 'ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಏಕಪಕ್ಷೀಯವಾದ ವಿಡಿಯೋ ತುಣುಕುಗಳು ಬಿತ್ತರವಾಗುತ್ತಿವೆ' ಎಂದು ಹೇಳಿದ್ದಾರೆ.
ಶಾಸಕರು ಸತ್ಯ ಸಂಗತಿಯನ್ನು ಈ ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದರು, ವಿಡಿಯೋವೊಂದನ್ನು ಸಹ ಫೋಸ್ಟ್ ಮಾಡಿದ್ದಾರೆ. 'ಕ್ಷೇತ್ರದ ಮಾಜಿ ಶಾಸಕ ಮತ್ತು ಇನ್ನಿತರ ವ್ಯಕ್ತಿಗಳ ನಿಜ ಬಣ್ಣವನ್ನು ಶೀಘ್ರದಲ್ಲೇ ಕ್ಷೇತ್ರದ ಜನರ ಮುಂದಿಡುತ್ತೇನೆ' ಎಂದು ತಿಳಿಸಿದ್ದಾರೆ.
ಶಾಸಕರ ವರ್ತನೆ ಬಗ್ಗೆ ಸಚಿವ ಬಿ. ಶ್ರೀರಾಮುಲು ಸಹ ಪ್ರತಿಕ್ರಿಯೆ ನೀಡಿದ್ದರು. "ಮಾತಿಗೆ ಮಾತು ಬೆಳೆದು ಶಾಸಕ ಭೀಮಾನಾಯ್ಕ ಭುಜ ತಟ್ಟಿದ್ದಾರೆ. ಶಾಸಕರು ಜವಾಬ್ದಾರಿಯುತ ನಾಯಕ. ಅವರ ಘಟನೆ ಅಲ್ಲಿ ತೋರಿಸುತ್ತದೆ. ನಿಮ್ಮ ವರ್ತನೆಯೇ ಇಂದು ಮಾಧ್ಯಮಗಳಲ್ಲಿ ಬಂದಿದೆ" ಎಂದು ಹೇಳಿದ್ದರು.

ಏಕಪಕ್ಷೀಯವಾದ ವಿಡಿಯೋ
ಆತ್ಮೀಯ ಬಂಧುಗಳೆ, ದಿನಾಂಕ 07-11-2020 ರಂದು ಹಬೊಹಳ್ಳಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಡೆದ ಗದ್ದಲದ ಕುರಿತು ನಿನ್ನೆಯಿಂದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಏಕಪಕ್ಷೀಯವಾದ ವಿಡಿಯೋ ತುಣುಕುಗಳು ಬಿತ್ತರವಾಗುತ್ತಿವೆ. ಆದರೆ ವಾಸ್ತವ ಸ್ಥಿತಿಯನ್ನು ಅವಲೋಕಿಸುವ ಮನಸ್ಥಿತಿಗಳು ಎಲ್ಲೂ ಕಂಡುಬರದಿರುವ ಕಾರಣ, ಅನಿವಾರ್ಯವಾಗಿ ನಾನು ನನ್ನ ಕ್ಷೇತ್ರದ ಬಂಧುಗಳಿಗೆ ಘಟನೆಯ ಸತ್ಯ ಸಂಗತಿಯನ್ನು ಈ ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದೇನೆ.

ಗುಂಡಾ ವರ್ತನೆ ನೋಡಿ
ದಯವಿಟ್ಟು ತಾವೆಲ್ಲರೂ ಈ ವಿಡಿಯೋದಲ್ಲಿನ ಸಮಯ 16 ಸೆಕೆಂಡ್ ನಿಂದ 26 ಸೆಕೆಂಡ್ ವರೆಗಿನ ಕ್ಲಿಪ್ಪಿಂಗ್ ಗಮನಿಸಿ. ಅದರಲ್ಲಿ ನಿನ್ನೆಯಿಂದ ತಾನು *ಸೋ ಕಾಲ್ಡ್ ಸಾಚಾ* ಎಂದು ಬಿಲ್ಡಪ್ ಕೊಡುತ್ತಿರುವ ಶ್ರೀ ಗರಗ ಪ್ರಕಾಶ ನ ಗುಂಡಾ ವರ್ತನೆ ಹೇಗಿದೆ ನೋಡಿ. ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲದ ಈತನು ಪೊಲೀಸ್ ಸಿಬ್ಬಂದಿ ಮತ್ತು ಬ್ಯಾರಿಕೇಡ್ ಗಳನ್ನು ತಳ್ಳಿಕೊಂಡು ಶಾಸಕರ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ನಿಜ ಸ್ವರೂಪ ಹೇಗಿದೆ ನೋಡಿ.

ಶೀಘ್ರದಲ್ಲೇ ಜನರ ಮುಂದಿಡುವೆ
ಪುರಸಭೆಯ ಇಡೀ ದುರಂತ ಘಟನಾವಳಿಗೆ ಇತನೇ ಕಾರಣೀಭೂತನಾಗಿದ್ದು, ಈತನ ಗುಂಡಾ ಪ್ರವೃತ್ತಿಯನ್ನು ಹಿಂದೆ ನಿಂತು ಪ್ರೋತ್ಸಾಹಿಸುತ್ತಿರುವ ಕ್ಷೇತ್ರದ ಮಾಜಿ ಶಾಸಕ ಮತ್ತು ಇನ್ನಿತರ ವ್ಯಕ್ತಿಗಳ ನಿಜ ಬಣ್ಣವನ್ನು ಶೀಘ್ರದಲ್ಲೇ ಕ್ಷೇತ್ರದ ಜನರ ಮುಂದಿಡುತ್ತೇನೆ.

ಸತ್ಯಾಸತ್ಯತೆ ಜನರಿಗೆ ತಿಳಿಯಲಿ
ವಾಸ್ತವದಲ್ಲಿ ಈ ವಿಡಿಯೋವನ್ನು ನಾನು ನಿನ್ನೆಯ ದಿನವೇ ಜನರ ಮುಂದಿಡಲು ಬಯಸಿದ್ದೆ. ಆದರೆ ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಕ್ಷೇತ್ರದ ನಾಟಕೀಯ ವ್ಯಕ್ತಿತ್ವಗಳ ನಿಜ ಮುಖವನ್ನು ಬಯಲು ಮಾಡುವ ಉದ್ದೇಶದಿಂದ ಘಟನಾವಳಿಯ ಸತ್ಯಾಂಶದ ವಿಡಿಯೋವನ್ನು ಇಂದು ಬಿಡುಗಡೆ ಮಾಡಿದ್ದೇನೆ. ಸತ್ಯಾಸತ್ಯಗಳು ಏನೆಂಬುದು ಜನತೆಯೆ ನಿರ್ಧರಿಸಲಿ ಎಂದು ಶಾಸಕರು ಪೋಸ್ಟ್ ಹಾಕಿದ್ದಾರೆ.












Click it and Unblock the Notifications