ರಾಜ್ಯಕ್ಕೇ ಮಾದರಿಯಾಗುತ್ತಿದೆ ಸರ್ಕಾರಿ ಒಡೆತನದ ನಾಗತಿಬಸಾಪುರ ತೋಟ
ಬಳ್ಳಾರಿ, ಜುಲೈ.13: ಹೂವಿನಹಡಗಲಿ ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿಯ ಸರ್ಕಾರಿ ಒಡೆತನದ ಈ ತೋಟ ಮಾದರಿ ತೋಟವಾಗಿ ಬೆಳೆದಿದೆ. ಈ ತೋಟಗಾರಿಕೆ ಪ್ರದೇಶವನ್ನು ಒಟ್ಟು 2ಕೋಟಿ ರೂಪಾಯಿ ವೆಚ್ಚ ಮಾಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿ ಮಾಡಿ ರಾಜ್ಯಕ್ಕೇ ಮಾದರಿ ತೋಟ'ಗಾರಿಕೆ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದಾರೆ ಇಲ್ಲಿನ ಸಿಬ್ಬಂದಿ - ಅಧಿಕಾರಿಗಳು.
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿ ಏಜೆನ್ಸಿ ಅಡಿಯಲ್ಲಿ ರಾಜ್ಯದ ಎಲ್ಲಾ ತೋಟಗಾರಿಕೆ ಕ್ಷೇತ್ರಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರ'ಗಳನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 100 ತೋಟಗಳನ್ನು ಆಯ್ಕೆ ಮಾಡಿಕೊಂಡಿದೆ.

ಬಸಾಪುರ ತೋಟಗಾರಿಕೆ ಕ್ಷೇತ್ರ ಆಯ್ಕೆ
2017-18ನೇ ಆರ್ಥಿಕ ಸಾಲಿನಲ್ಲಿ ಮೊದಲ ಹಂತದಲ್ಲಿ ಜಿಲ್ಲೆಗೊಂದರಂತೆ ಅದರಲ್ಲೂ ಯಾವುದೇ ಭೂ ವಿವಾದಗಳಿಲ್ಲದ, ಉತ್ತಮ ಹವಾಗುಣ ಹೊಂದಿರುವ, ರಸ್ತೆ, ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿರುವ 30ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಲು ಕೈಗೆತ್ತಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ತೋಟಗಾರಿಕೆ ಕ್ಷೇತ್ರ ಆಯ್ಕೆಯಾಗಿದೆ.

ಉತ್ತಮ ಪರಿಸರ ಕೇಂದ್ರ
ಹೂವಿನಹಡಗಲಿ - ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿಯ ಕೊಮಾರ್ನಹಳ್ಳಿ ತಾಂಡಾ ಸಮೀಪದಲ್ಲಿ 1969ರಲ್ಲಿ ಆರಂಭವಾಗಿರುವ ಈ ತೋಟ, 100.5 ಎಕರೆ ಪ್ರದೇಶ ವಿಸ್ತೀರ್ಣ ಅಂದರೆ 2400 ಮೀ. ಸುತ್ತಳತೆ ಹೊಂದಿ, ಬೆಟ್ಟದ ಶ್ರೀ ಮಲ್ಲೇಶ್ವರ ತಪ್ಪಲಿನ ಅಡಿಯಲ್ಲಿ ನಿತ್ಯ ನಿರಂತರ ಹಸಿರಿನಿಂದ ಕಂಗೊಳಿಸುತ್ತಿದೆ.
ಬೆಟ್ಟದ ತಪ್ಪಲಿನಿಂದ ಹರಿದು ಬರುವ ಮಳೆ ನೀರು ಕ್ಷೇತ್ರಕ್ಕೆ ಆಸರೆಯಾಗಿದೆ. ಇದರ ಪಕ್ಕದಲ್ಲೇ ಕಳೆದ ಸಾಲಿನಲ್ಲಿ ಅಂದಾಜು 90ಲಕ್ಷ ರೂ. ವೆಚ್ಚದಲ್ಲಿ ಜಿನುಗು ಕೆರೆ ನಿರ್ಮಿಸಲಾಗಿದೆ. ಹಾಗಾಗಿ ಬರುವ ದಿನಗಳಲ್ಲಿ ಕ್ಷೇತ್ರ ಸಮಗ್ರ ಅಭಿವೃದ್ಧಿ ಹೊಂದಿ ಉತ್ತಮ ಪರಿಸರ ಕೇಂದ್ರವಾಗುವ ಎಲ್ಲ ಲಕ್ಷಣಗಳಿವೆ.

ಚೈನ್ ಲಿಂಕ್ ಮೆಸ್ ಅಳವಡಿಕೆ
ಲೋಕೋಪಯೋಗಿ ಇಲಾಖೆ ಈ ತೋಟದ ಅಭಿವೃದ್ಧಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ತೋಟದಲ್ಲಿ ನೀರಿನ ಕೊರತೆ ನೀಗಿಸಲು ಕೊಳವೆ ಬಾವಿ ಕೊರೆಸಲಾಗಿದೆ. ನಿರಂತರ ಕಳ್ಳರ ಹಾವಳಿಯಿಂದ ರಕ್ಷಿಸಲು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿ, 70 ಲಕ್ಷ ರೂಪಾಯಿ ವೆಚ್ಚದಲ್ಲಿ ಚೈನ್ ಲಿಂಕ್ ಮೆಸ್ ಅಳವಡಿಸಲಾಗಿದೆ.
ಜಾನುವಾರು, ಎರೆಹುಳು ಗೊಬ್ಬರ ತಯಾರಿಕೆ ಘಟಕ, ಹನಿ ನೀರಾವರಿ, ಪಾಲಿ ಹೌಸ್, ಆಂತರಿಕ ರಸ್ತೆಗಳು, ದಾಸ್ತಾನು ಕೋಣೆ, ಸೋಲಾರ್ ವಿದ್ಯುತ್ ವ್ಯವಸ್ಥೆ, ಹನಿ ನೀರಾವರಿ ಘಟಕ ಕಾರ್ಯ ನಿರ್ವಹಿಸಲಿವೆ.

ಸ್ಥಳೀಯರಿಗೆ ಉದ್ಯೋಗಾವಕಾಶ
ಮಾವು, ಸಪೋಟ, ಕಿತ್ತಳೆ, ಜೂಜುಬಾರಿ, ಅಂಜೂರ, ಸೇರಿದಂತೆ ನಾನಾ ವಿಧದ ಹೊಸ ಹೊಸ ತಳಿಯ ಕಾಯಿ ಗಿಡಗಳನ್ನು ನಾಟಿ ಮಾಡುವ ಮೂಲಕ ತಾಂತ್ರಿಕತೆ ಮೂಲಕ ಬೆಳೆಸಲಾಗಿದೆ. ಬಳಿಕ ಗಿಡಗಳನ್ನು ಸಕಾಲಕ್ಕೆ ರೈತರಿಗೆ ವಿತರಿಸಲಾಗುತ್ತದೆ.
ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೇಟೆಂಟ್ ಪಡೆದಿರುವ ಹಡಗಲಿ ಜಿಐ ಮಲ್ಲಿಗೆ' ಸೇರಿ ಸಪೋಟ ಸಸಿಗಳು, ತೆಂಗು, ಪೇರಲ ಇದೆ. ಉತ್ತಮ ಪರಿಸರ ಸೃಷ್ಟಿಸುವುದು, ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಲಿದೆ.












Click it and Unblock the Notifications