ಬಳ್ಳಾರಿ: ನಂದಿನಿ ಕೆ.ಆರ್. ಸೇರಿದಂತೆ 3 ಐಎಎಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ
ಬಳ್ಳಾರಿ, ಮಾರ್ಚ್ 29: ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾಗಿರುವ ಕೆ.ಆರ್. ನಂದಿನಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.
ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಬಡ್ತಿ ಪಡೆದು ವರ್ಗಾವಣೆಯಾದ ಸಿದ್ರಾಮಪ್ಪ ಚಳಕಾಪೂರೆ, ಪ್ರೋಬೆಷನರಿ ಐಎಎಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಬೇರೆಡೆ ವರ್ಗಾವಣೆಯಾದ ಅನ್ಮೋಲ್ ಜೈನ್ರನ್ನು ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ರಾತ್ರಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮೂರು ಜನ ಹಿರಿಯ ಅಧಿಕಾರಿಗಳಿಗೆ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಗಿದ್ದು, ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಕೆ.ಆರ್. ನಂದಿನಿ, ಸಿದ್ರಾಮಪ್ಪ ಚಳಕಾಪೂರೆ, ಅನ್ಮೋಲ್ ಜೈನ್ ಅವರು ಹಂಚಿಕೊಂಡರು.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಪಂಚಾಯತ್ ಸಿಇಒ ಜೆ.ಲಿಂಗಮೂರ್ತಿ, ಎಸ್ಪಿ ಸೈದುಲು ಅದಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಡಿಎಫ್ಒ ಸಂದೀಪ್ ಸೂರ್ಯವಂಶಿ ಮಾತನಾಡಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.