ಬಳ್ಳಾರಿಯಲ್ಲಿ ಕೊರೊನಾ ಭಯಕ್ಕೆ ಶವದ ಹತ್ತಿರ ಸುಳಿಯದ ಕುಟುಂಬ; ಅಂತ್ಯಸಂಸ್ಕಾರ ಮಾಡಿದವರಲ್ಲೀಗ ಭಯ
ಬಳ್ಳಾರಿ, ಜೂನ್ 24: ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲಿ ಸಾವಿಗೀಡಾಗಿದ್ದು, ಕೊರೊನಾ ವೈರಸ್ ಶಂಕೆಯಿಂದಾಗಿ ಕುಟುಂಬದವರು ಆ ವ್ಯಕ್ತಿಯ ಮೃತದೇಹದತ್ತ ಸುಳಿಯದೇ ನಡುರಸ್ತೆಯಲ್ಲೇ ಬಿಟ್ಟಿರುವ ಘಟನೆ ನಿನ್ನೆ ರಾತ್ರಿ ಬಳ್ಳಾರಿಯಲ್ಲಿ ನಡೆದಿದೆ. ಜೊತೆಗೆ ಈ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದರೂ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ.
Recommended Video
ಪರಿಸ್ಥಿತಿಯಿಂದಾಗಿ, ಸ್ಥಳೀಯರೇ ಆ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದು, ಇದೀಗ ಅಂತ್ಯಸಂಸ್ಕಾರ ನಡೆಸಿದ ಮಂದಿಯಲ್ಲಿ ಕೊರೊನಾ ವೈರಸ್ ಭೀತಿ ಉಂಟಾಗಿದೆ. ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಕುರಿತು ಟೀಕೆಯೂ ಕೇಳಿಬಂದಿದೆ.

ಸತ್ತ ವ್ಯಕ್ತಿ ಎದುರು ಮನೆಯಲ್ಲಿದ್ದ ಕೊರೊನಾ ಸೋಂಕಿತ ದಂಪತಿ
ಬಳ್ಳಾರಿಯ ರೂಪನಗುಡಿ ನಿವಾಸಿ ಸುಂಕ್ಲಪ್ಪಾ ನಿನ್ನೆ ಬೆಳಗಿನ ಜಾವ ಅನಾರೋಗ್ಯದಿಂದ ಬಳಲಿ ಸಾವಿಗೀಡಾಗಿದ್ದರು. ಆದರೆ ಸುಂಕ್ಲಪ್ಪಾ ಅವರ ಮನೆಯ ಎದುರಿಗೆ ವಾಸ ಮಾಡುವ ದಂಪತಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಮುಂಜಾನೆ ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಮೃತದೇಹದ ಹತ್ತಿರ ಸುಳಿಯದ ಮನೆಯವರು
ಸುಂಕ್ಲಪ್ಪಾ ಟಿ.ಬಿ ಕಾಯಿಲೆಯಿಂದ ಬಳಲುತ್ತಿದ್ದು, ಅಸ್ವಸ್ಥರಾಗಿ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಆದರೆ ಸುಂಕ್ಲಪ್ಪಾ ಕುಟುಂಬ ಸದಸ್ಯರು ಆ ವ್ಯಕ್ತಿಯನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಕೊರೊನಾ ಸೋಂಕು ಇದೆ ಎನ್ನುವ ಅನುಮಾನದಿಂದ ಮನೆಯವರಾರೂ ಹತ್ತಿರ ಸುಳಿಯಲಿಲ್ಲ.

ಆರೋಗ್ಯ ಇಲಾಖೆ ಸಿಬ್ಬಂದಿಯೂ ಬರಲಿಲ್ಲ
ಬೆಳಗಿನ ಜಾವ 8 ಗಂಟೆಗೆ ಅವರು ಮೃತಪಟ್ಟಿದ್ದು, ರಾತ್ರಿ ಕಳೆದರೂ ಯಾರು ಶವವನ್ನು ತೆಗೆದುಕೊಂಡು ಹೋಗಲಿಲ್ಲ. ಬೆಳಿಗ್ಗೆ ಇಂದ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿದರೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಇತ್ತ ಸುಳಿಯಲಿಲ್ಲ.

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ
ಕೊನೆಗೆ ಶವವನ್ನು ಸ್ಥಳೀಯ ಯುವಕರ ಸಹಾಯದಿಂದ ತಡ ರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆದರೆ ಈಗ ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಜನರಲ್ಲಿ ಆತಂಕ ಮನೆ ಮಾಡಿದೆ. ಮೃತ ವ್ಯಕ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡದೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಹೀಗಾಗಿ ವ್ಯಕ್ತಿಗೆ ಸೋಂಕು ಇದೆಯೋ ಇಲ್ಲವೋ ಎನ್ನುವುದು ತಿಳಿಯದೇ ಗೊಂದಲದಲ್ಲಿದ್ದಾರೆ. ಜೊತೆಗೆ ಸಚಿವರ ತವರು ಜಿಲ್ಲೆಯಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications