ಡಿಕೆ ಶಿವಕುಮಾರ್, ಸೋಮಶೇಖರ ರೆಡ್ಡಿ ಭೇಟಿ!
ಬಳ್ಳಾರಿ, ಆ.12 : ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆ ಕಾವು ಏರುತ್ತಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪರಸ್ಪರ ರಾಜಕೀಯ ವೈರಿಗಳಾದ ಬಿಜೆಪಿ ಮುಖಂಡ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಬಳ್ಳಾರಿಯ ಉಪ ಚುನಾವಣೆ ಉಸ್ತುವಾರಿ ವಹಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸೋಮವಾರ ಭೇಟಿಯಾಗಿದ್ದಾರೆ.
ಸೋಮವಾರ ಉಭಯ ನಾಯಕರು ಭೇಟಿಯಾಗಿದ್ದು, ಒಟ್ಟಿಗೆ ಊಟ ಮಾಡಿದ್ದಾರೆ. ಭೇಟಿಯಾಗಿದ್ದು ನಿಜ ಎಂದು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ. ಸೋಮಶೇಖರ ರೆಡ್ಡಿ ಅವರು ಅವರು ಆಹ್ವಾನ ನೀಡಿದ್ದರಿಂದ ಔತಣಕೂಟಕ್ಕೆ ಅವರ ಮನೆಗೆ ಹೋಗಿದ್ದೆ ಎಂದು ಮಾಧ್ಯಮಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಭೇಟಿಯ ವೇಳೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಅವುಗಳನ್ನು ಈ ಸಂದರ್ಭದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಕುತೂಹಲ ಮೂಡಿಸಿದ್ದಾರೆ. [ಉಪ ಚುನಾವಣೆ ಟಿಕೆಟ್, ಬಳ್ಳಾರಿ ಕೈ ಕಚೇರಿ ಧ್ವಂಸ]
ಸೋಮಶೇಖರ ರೆಡ್ಡಿ : ಆದರೆ, ಈ ಭೇಟಿಯ ಬಗ್ಗೆ ಸೋಮಶೇಖರ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದು, ಶಿವಕುಮಾರ್ ನಮ್ಮ ಮನೆಗೆ ಬಂದಿದ್ದರು. ಮನೆಗೆ ಬಂದವರನ್ನು ಒಳಗೆ ಕರೆಯುವುದು, ಆತಿಥ್ಯ ನೀಡುವುದು ಸೌಜನ್ಯ ಎಂದು ತಿಳಿಸಿದ್ದಾರೆ.
ಅವರು ಮನೆಗೆ ಬಂದಿದ್ದರಿಂದ ಅತಿಥಿ ಸತ್ಕಾರ ಮಾಡಿದ್ದೇನೆ. ರಾಜಕೀಯ ವಿಷಯ ಮಾತನಾಡುವುದು ಬೇಡ ಎಂದು ಅವರಿಗೆ ಮೊದಲೇ ಹೇಳಿದ್ದೆ. ಈ ವಿದ್ಯಮಾನವನ್ನು ಅನ್ಯಥಾ ಬಿಂಬಿಸಬಾರದು. ನನ್ನ ಜೀವ ಹೋಗುವವರೆಗೂ ಬಿಜೆಪಿಯಲ್ಲಿ ಉಳಿಯುತ್ತೇನೆ ಎಂದು ಹೇಳಿದ್ದಾರೆ.
ರೆಡ್ಡಿಗಳ ವಿರುದ್ಧ ವಾಗ್ದಾಳಿ : ಅತ್ತ ಭಾನುವಾರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಭಾನುವಾರ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ರೆಡ್ಡಿ ಸಹೋದರರು ಮತ್ತು ರಾಮುಲು ಸಾರ್ವಜನಿಕ ಜೀವನದಲ್ಲಿ ಇರಲು, ಜನ ಪ್ರತಿನಿಧಿಗಳಾಗಲು ಅರ್ಹರಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿ ಕೋಟಿಗಟ್ಟಲೇ ಅಕ್ರಮ ಹಣ ಸಂಪಾದನೆ ಮಾಡಿರುವ ಬಗ್ಗೆ ಲೋಕಾಯುಕ್ತ ವರದಿಯನ್ನು ಬಿಜೆಪಿ ಮೂಲೆಗೆಸೆದಿತ್ತು. ಕಾಂಗ್ರೆಸ್ ಅದನ್ನು ಅನುಷ್ಠಾನಕ್ಕೆ ತಂದು ವಿಶೇಷ ತನಿಖಾ ದಳ ರಚಿಸಿತು ಎಂದು ಸಿದ್ದರಾಮಯ್ಯ ಘಟನಾವಳಿಗಳನ್ನು ವಿವರಿಸಿದರು.
ಸಂಸದರಾದ ಬಿ.ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರವಾದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಆ.21ರಂದು ನಡೆಯಲಿದೆ. ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಓಬಳೇಶ್ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications