ರಾಜ್ಯದಲ್ಲಿ ಕಾಂಗ್ರೆಸ್ನ ಸ್ಥಿತಿ ವಿಕ್ರಮ ಬೇತಾಳದ ಕಥೆಯಂತಾಗಿದೆ: ಬಳ್ಳಾರಿಯಲ್ಲಿ ಶ್ರೀ ರಾಮುಲು ವ್ಯಂಗ್ಯ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ವಿಕ್ರಮ ಬೇತಾಳದ ಕಥೆಯಂತೆ ಆಗಿದೆ ಎಂದು ಸಚಿವರ ಶ್ರೀರಾಮುಲು ಬಳ್ಳಾರಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ, ಫೆಬ್ರವರಿ, 12: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ವಿಕ್ರಮ ಬೇತಾಳದ ಕಥೆಯಂತೆ ಆಗಿದೆ. ವಿಕ್ರಮನನ್ನು ಬೇತಾಳ ಕಾಡಿದಂತೆ ಕಾಂಗ್ರೆಸ್ ಕಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ವಿಕ್ರಮ ಬೇತಾಳನಂತೆ ಸಾಕಷ್ಟು ಜನರು ಇದ್ದಾರೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದರು.
ಬಳ್ಳಾರಿ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಕಾಂಗ್ರಸ್ ಅಧಿಕಾರದ ಆಸೆಯ ಕನಸು ಕಾಣುತ್ತಿದೆ.
ಜೆಡಿಎಸ್ ಅಧಿಕಾರಕ್ಕೆ ಬರಲು ಜೋಶಿ ಅವರನ್ನು ರಾಜ್ಯದ ಬ್ರಾಹ್ಮಣರಲ್ಲ ಎಂದಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಕಡಿದು ಕಟ್ಟೆ ಹಾಕಿದ್ದಾರೆ ಗೊತ್ತಿಲ್ಲ ಎಂದು ಹರಿಹಾಯ್ದರು.

ಮಾಜಿ ಸಚಿವರ ವಿರುದ್ಧ ಶ್ರೀರಾಮುಲು ಗರಂ
ಶಿಥಿಲಗೊಂಡ ಶ್ರೀರಾಂಪುರ ಕಾಲೋನಿ ಶಾಲೆಗೆ ಡಿಎಂಎಫ್ನಿಂದ 3.60 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಎಸ್ಸಿ, ಎಸ್ಟಿ ಜನಾಂಗದವರಿಗೆ ಮಾದರಿ ಶಾಲೆ ಸಿಗಬೇಕೆಂಬ ಉದ್ದೇಶದಿಂದ ಈ ಕೆಲಸ ಕೈಗೊಳ್ಳಲಾಗಿದೆ. ಶಾಲೆಗೆ ಭೂಮಿ ಪೂಜೆ ಮಾಡಿದ್ದೇವೆ. ಮೈದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಮಾಜಿ ಸಚಿವರು ಕೆಲಸ ನಿಲ್ಲಿಸಿ, ರಾಜಕಾರಣ ಮಾಡುವುದು ಸರಿಯಲ್ಲ. ಶಾಲೆಯಲ್ಲಿ ಎಲೆಕ್ಷನ್ ಬೂತ್ ಆಗಿರುವುದರಿಂದ ಚುನಾವಣೆ ನಂತರ ಹಳೆ ಕಟ್ಟಡ ತೆರವುಗೊಳಿಸಲಾಗುತ್ತದೆ ಎಂದು ಹೇಳಿದ ಅವರು, ಮಾಜಿ ಸಚಿವ ದಿವಾಕರ ಬಾಬು ನಡೆಯಿಂದ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಹರಿಹಾಯ್ದರು.
ಶಾಲೆ ಕೆಲಸವನ್ನು ನಿಲ್ಲಿಸಬೇಡಿ, ಶಾಲೆ ಕಾಮಗಾರಿ ಆರಂಭಕ್ಕೆ ಅವಕಾಶ ನೀಡಲು ಮನವಿ ಮಾಡುತ್ತೇನೆ. ಕಾಮಗಾರಿ ಆರಂಭಿಸದಿದ್ದರೆ ಹಣ ಹಿಂದಕ್ಕೆ ಹೋಗುತ್ತದೆ. ಮಾಜಿ ಸಚಿವರೊಂದಿಗೆ ಜಗಳ ಮಾಡಲು ಹೋಗುವುದಿಲ್ಲ. ಮನವಿ ಮಾಡುತ್ತೇನೆ. ಧರ್ಮ ಮತ್ತು ಸತ್ಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತೇನೆ ಎಂದರು.
ಗಂಗಾವತಿಯಲ್ಲಿ ಸ್ಪರ್ಧೆ ಬಗ್ಗೆ ರಾಮುಲು ಹೇಳಿದ್ದೇನು?
ಇನ್ನು ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ದ ಗಂಗಾವತಿ ಸ್ಪರ್ಧೆ ಮಾಡುತ್ತೇನೆಂಬ ವಿಚಾರಕ್ಕೆ ಈಗಲೇ ಪ್ರತಿಕ್ರಿಯೆ ನೀಡಲಾಗದು. ಇನ್ನೂ ತುಂಬಾ ಸಮಯ ಇದೆ. ಪಕ್ಷ ತೀರ್ಮಾನ ಮಾಡಿದ ಮೇಲೆ ನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು. ಹಾಗೆಯೇ ಪ್ರಧಾನಮಂತ್ರಿ ಬಂದಾಗ ಶಿಷ್ಟಾಚಾರ ಇರುತ್ತದೆ. ಅಲ್ಲಿ ಸಿಎಂ, ರಾಜ್ಯಪಾಲರು ಇರುತ್ತಾರೆ. ನಾವು ಹೋಗುವುದಕ್ಕೆ ಆಗುವುದಿಲ್ಲ ಎಂದರು. ಇನ್ನು ಜಿಲ್ಲೆಯ ಮೈನಿಂಗ್ ಸ್ಕೂಲ್ ಭೂಮಿ ಪೂಜೆಗೆ ಪ್ರಧಾನ ಮಂತ್ರಿಯವರಿಗೆ ಆಹ್ವಾನ ಮಾಡುತ್ತೇವೆ ಎಂದರು.

ಪ್ರಾದೇಶಿಕ ಪಕ್ಷದಿಂದ ತೊಂದರೆ ಆಗಲ್ಲ
ಹಾಗೆಯೇ ಪ್ರಾದೇಶಿಕ ಪಕ್ಷದಿಂದ ರಾಗಿ ಕಾಳಿನಷ್ಟು ಬಿಜೆಪಿಗೆ ತೊಂದರೆಯಾಗುವುದಿಲ್ಲ. ಶಾಸಕ ಸೋಮಶೇಖರ ರೆಡ್ಡಿ ಸ್ಪರ್ಧೆ ಮಾಡುವುದು 100% ಗ್ಯಾರಂಟಿ. ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿ ಪಟ ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದೆ ಜೆ. ಶಾಂತಾ, ಬಿಜೆಪಿ ಮುಖಂಡ ಗುರುಲಿಂಗನಗೌಡ ಸೇರಿದಂತೆ ಮತ್ತತರರು ಹಾಜರಿದ್ದರು.












Click it and Unblock the Notifications