ಫಲಿಸದ ಬಿಜೆಪಿ ತಂತ್ರ; ಬಳ್ಳಾರಿ ಪಾಲಿಕೆ ಕಾಂಗ್ರೆಸ್ ಪಾಲು!
ಬಳ್ಳಾರಿ, ಮಾರ್ಚ್ 20; ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 34ನೇ ವಾರ್ಡ್ನ ಎಂ. ರಾಜೇಶ್ವರಿ, ಉಪ ಮೇಯರ್ ಆಗಿ 37ನೇ ವಾರ್ಡ್ನ ಮಾಲನ್ ಬಿ. ಆಯ್ಕೆಯಾಗಿದ್ದಾರೆ. ಸಚಿವ ಬಿ. ಶ್ರೀರಾಮುಲು ತಂತ್ರ ಫಲಿಸದೇ ಪಾಲಿಕೆ ಕಾಂಗ್ರೆಸ್ ಕೈ ಸೇರಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶನಿವಾರ ನೂತನ ಮೇಯರ್, ಉಪ ಮಯೇರ್ ಆಯ್ಕೆಗೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತ ಡಾ. ಎನ್. ವಿ. ಪ್ರಸಾದ್ ನೇತೃತ್ವದಲ್ಲಿ ಮತದಾನ ನಡೆಯಿತು.
ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್ಗಳ ಸದಸ್ಯರು ಹಾಗೂ ಇಬ್ಬರು ಎಂಎಲ್ಎ, ಇಬ್ಬರು ಸಂಸದರು ಹಾಗೂ ಓರ್ವ ವಿಧಾನಪರಿಷತ್ ಸದಸ್ಯರು ಸೇರಿದಂತೆ 44 ಸದಸ್ಯರು ಮತದಾನ ಮಾಡಿದರು.

ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ತಲಾ ಇಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರು. ನಾಮಪತ್ರಗಳನ್ನು ವಾಪಸ್ ಪಡೆಯಲು 2 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಯಾರೂ ನಾಮಪತ್ರ ವಾಪಸ್ ಪಡೆಯದ ಹಿನ್ನಲೆಯಲ್ಲಿ ಮತದಾನ ನಡೆಸಲಾಯಿತು.
ಮೇಯರ್ ಆಗಿ ಆಯ್ಕೆಯಾದ ಎಂ. ರಾಜೇಶ್ವರಿ 29 ಮತಗಳನ್ನು ಹಾಗೂ ಉಪ ಮೇಯರ್ ಮಾಲನ್ ಬಿ. ಅವರು ಸಹ 29 ಮತಗಳನ್ನು ಪಡೆಯುವ ಮೂಲಕ ಆಯ್ಕೆಗೊಂಡರು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ 21ನೇ ವಾರ್ಡ್ನ ಸುರೇಖಾ ಗೌಡ ಹಾಗೂ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ 25ನೇ ವಾರ್ಡ್ನ ಎಂ.ಗೋವಿಂದರಾಜಲು 15 ಮತಗಳನ್ನ ಪಡೆದರು.
ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಬಳಿಕ 4 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಳ್ಳಾರಿ ಪವನ ಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಮುಂತಾದವರು ಉಪಸ್ಥಿತರಿದ್ದರು.
2ನೇ ಬಾರಿಗೆ ಕಾಂಗ್ರೆಸ್ ಅಧಿಕಾರಕ್ಕೆ; ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸತತ 2ನೇ ಬಾರಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ತಂತ್ರಗಳು ಫಲಿಸದೇ ಪಾಲಿಕೆ ಆಡಳಿತ ಕಾಂಗ್ರೆಸ್ ಪಾಲಾಗಿದೆ.
ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಾದ ಸದಸ್ಯ ಬಲ ಇಲ್ಲದೇ ಇದ್ದರೂ ಕಣಕ್ಕಿಳಿದಿದ್ದ ಬಿಜೆಪಿ ಸದಸ್ಯರು ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದರು. ಅಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಸದಸ್ಯರನ್ನು ಬೆಂಗಳೂರಿಗೆ ಕಳಿಸಿತ್ತು.
21 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರ ಸದಸ್ಯರು ಬೆಂಗಳೂರಿಗೆ ಹಾರಿದ್ದರು. ಶುಕ್ರವಾರ ಎಲ್ಲರೂ ಬಳ್ಳಾರಿಗೆ ಬಂದರೂ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪಾಲಿಕೆ ಚುನಾವಣೆಯಲ್ಲಿ 13 ಸ್ಥಾನ ಗೆದ್ದಿದ್ದ ಬಿಜೆಪಿ ಕೊನೆ ಕ್ಷಣದ ಬಲದಾವಣೆ ನಿರೀಕ್ಷೆ ಮಾಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಪುತ್ರ ಸೋಲು ಕಂಡಿದ್ದರು. ಈಗ ಪಕ್ಷ ಸದಸ್ಯರು ಮೇಯರ್ ಚುನಾವಣೆಯಲ್ಲಿ ಸಹ ಜಯಗಳಿಸುವಲ್ಲಿ ವಿಫಲರಾಗಿದ್ದಾರೆ.
35 ಸದಸ್ಯ ಬಲದ ಬಳ್ಳಾರಿ ಮಹಾನಗರ ಪಾಲಿಕೆಯನ್ನು 39 ವಾರ್ಡ್ಗಳಾಗಿ ಹೆಚ್ಚಿಸಲಾಗಿತ್ತು. ಬಳಿಕ ಚುನಾವಣೆ ನಡೆದಿತ್ತು. ವಾರ್ಡ್ ಮರು ವಿಂಗಡನೆ ಕಾರಣದಿಂದಾಗಿ ಎರಡು ವರ್ಷಗಳ ಬಳಿಕ ಪಾಲಿಕೆ ಚುನಾವಣೆ ನಡೆದಿತ್ತು.
39 ಸದಸ್ಯ ಬಲದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 13, ಕಾಂಗ್ರೆಸ್ 21, 5 ಪಕ್ಷೇತರರು ಜಯಗಳಿಸಿದ್ದರು. ವಾರ್ಡ್ ನಂಬರ್ 18ರಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಪುತ್ರ ಶ್ರವಣ್ ಕುಮಾರ ರೆಡ್ಡಿ ಸೋಲು ಕಂಡಿದ್ದರು.
ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 5 ಪಕ್ಷೇತರರು ಗೆಲುವು ಕಂಡಿದ್ದರು. ಬಿ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಪ್ರಚಾರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದು ಕೊಡಲು ವಿಫಲವಾಗಿತ್ತು.











Click it and Unblock the Notifications