ಕಾರು-ಲಾರಿ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು
ಬಳ್ಳಾರಿ, ಆಗಸ್ಟ್ 18: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು, ಶಿವಪುರ ಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಗುರುವಾರ ಲಾರಿ-ಕಾರಿನ ಮಧ್ಯೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ, ಸಿಂದಗಿಯ ಶಿವಣ್ಣ ಹಡಪದ (25), ಬಸವರಾಜ್ ಹಡಪದ (24), ಸಂಗಮೇಶ್ ಮಲ್ಲಿಕಾರ್ಜುನ (24), ಕಿರಣ್ ರವೀಂದ್ರ ನವಿ (24) ಮೃತಪಟ್ಟವರು.[ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಸಿಇಒ ಎಸಿಬಿ ಬಲೆಗೆ]
ನಾಲ್ವರೂ ತೀರ್ಥಯಾತ್ರೆಗೆ ತೆರಳಿದ್ದರು. ಬುಧವಾರ ರಾತ್ರಿ ಮೈಸೂರಿನಲ್ಲಿ ಊಟ ಮುಗಿಸಿ, ಸ್ವಂತ ಊರಿಗೆ ಮರಳುತ್ತಿದ್ದರು. ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ತಿಳಿಸಿದ್ದು, ಅವರು ಬಂದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆ ನಂತರ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಲಾರಿ ಚಾಲಕ, ಸೇಲಂನ ಪಳನಿ ತಕ್ಷಣವೇ ಪೊಲೀಸರಿಗೆ ಶರಣಾಗಿದ್ದಾನೆ. ಬಳ್ಳಾರಿ ಹೆಚ್ಚುವರಿ ಎಸ್ ಪಿ ವಿಜಯ್ ಡಂಬಳ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.