ಬಳ್ಳಾರಿ ರಾಜಕೀಯದಿಂದ ದೂರವಾಗುತ್ತಿದ್ದಾರೆ ಶ್ರೀರಾಮುಲು?
Recommended Video
ಬಳ್ಳಾರಿ, ನವೆಂಬರ್ 14 : ಬಳ್ಳಾರಿ ರಾಜಕೀಯ ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ದದ್ದು ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ. ಈಗ ಕಾಲಚಕ್ರ ಒಂದು ಸುತ್ತು ತಿರುಗಿದೆ. ರೆಡ್ಡಿ ಬಳ್ಳಾರಿಯಲ್ಲಿಯೇ ಇಲ್ಲ, ಶ್ರೀರಾಮುಲು ಸಹ ಜಿಲ್ಲೆಯ ರಾಜಕೀಯದಿಂದ ದೂರವಾಗುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಬಿ. ಶ್ರೀರಾಮುಲು ಆರೋಗ್ಯ ಸಚಿವರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಗೆದ್ದಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ. ನಿಧಾನವಾಗಿ ಅವರು ಬಳ್ಳಾರಿ ರಾಜಕೀಯದಿಂದ ದೂರು ಸರಿಯುತ್ತಿದ್ದಾರೆ.
ಬುಧವಾರ ಕರ್ನಾಟಕ ಬಿಜೆಪಿ 15 ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದಲ್ಲಿಯೂ ಚುನಾವಣೆ ನಡೆಯುತ್ತಿದೆ. ಆದರೆ, ಅದಕ್ಕೆ ಬಿ. ಶ್ರೀರಾಮುಲು ಉಸ್ತುವಾರಿಯಲ್ಲ.
ವಿಜಯನಗರ ಜಿಲ್ಲಾ ರಚನೆ ವಿಚಾರದಲ್ಲಿ ಆನಂದ್ ಸಿಂಗ್ ಮತ್ತು ಶ್ರೀರಾಮುಲು ನಡುವೆ ಒಮ್ಮತವಿಲ್ಲ. ಬಿಜೆಪಿಯಿಂದ ಕಾಂಗ್ರೆಸ್ಗೆ ಹೋಗಿದ್ದ ಆನಂದ್ ಸಿಂಗ್, ಅನರ್ಹಗೊಂಡು ಈಗ ಪುನಃ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ವಾಪಸ್ ಆಗಿದ್ದಾರೆ.

ಚುನಾವಣೆ ಉಸ್ತುವಾರಿ ಯಾರು?
ವಿಜಯನಗರ ಉಪ ಚುನಾವಣೆಗೆ ಗೋವಿಂದ ಕಾರಜೋಳ, ಎನ್. ರವಿಕುಮಾರ್, ಗವಿಯಪ್ಪ, ಸಂಗಣ್ಣ ಕರಡಿ, ಹಾಲಪ್ಪ ಆಚಾರ್, ನಾರಾಯಣ ಸಾ ಬಾಂಡಗೆ, ದೇವೇಂದ್ರಪ್ಪ ಉಸ್ತುವಾರಿಗಳಾಗಿದ್ದಾರೆ. ಶ್ರೀರಾಮುಲು ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಉಪ ಚುನಾವಣೆ ಹೊಣೆ ಅವರಿಗೆ ಏಕೆ ನೀಡಿಲ್ಲ? ಎಂಬುದು ಸದ್ಯದ ಪ್ರಶ್ನೆ.

ಜಿಲ್ಲಾ ಉಸ್ತುವಾರಿ ಕೈ ತಪ್ಪಿತ್ತು
ಆರೋಗ್ಯ ಸಚಿವ ಬಿ. ಶ್ರೀರಾಮುಲು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು. ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಳಿ ಮನವಿ ಮಾಡಿದರೂ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ಅವರಿಗೆ ನೀಡಲಿಲ್ಲ. ಈ ಮೂಲಕ ಅವರು ಬಳ್ಳಾರಿಯಿಂದ ದೂರವಾದರು.

ಇಬ್ಬರ ನಡುವೆ ಒಮ್ಮತವಿಲ್ಲ
ವಿಜಯನಗರವನ್ನು ಜಿಲ್ಲೆಯಾಗಿ ಮಾಡಲು ಆಗ್ರಹಿಸಿ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಈ ವಿಚಾರದಲ್ಲಿ ಆನಂದ್ ಸಿಂಗ್ ಮತ್ತು ಶ್ರೀರಾಮುಲು ನಡುವೆ ಒಮ್ಮತವಿಲ್ಲ. ಹಿಂದೆ ಶ್ರೀರಾಮುಲು, ರೆಡ್ಡಿ ಪಾಳಯದಲ್ಲಿಯೇ ಗುರುತಿಸಿಕೊಂಡಿದ್ದ ಆನಂದ್ ಸಿಂಗ್ ಬಳಿಕ ತಟಸ್ಥರಾದರು. ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದಾಗಲೂ ಅವರ ಜೊತೆ ನಿಲ್ಲಲಿಲ್ಲ.

ಆಪ್ತ ಮಿತ್ರರು ಇಬ್ಬರೂ ದೂರ
ಬಳ್ಳಾರಿ ರಾಜಕೀಯದಲ್ಲಿ ಒಟ್ಟಾಗಿದ್ದ ಜೋಡಿ ಈಗ ಜಿಲ್ಲಾ ರಾಜಕೀಯದಿಂದ ದೂರವಾಗುತ್ತಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್ ಷರತ್ತಿನ ಅನ್ವಯ ಬಳ್ಳಾರಿಗೆ ಬರುವಂತಿಲ್ಲ. ರಾಜಕೀಯದಿಂದಲೂ ದೂರವಾಗಿದ್ದಾರೆ. ಬಿ. ಶ್ರೀರಾಮುಲು ಬಿಜೆಪಿ ತೊರೆದು, ಈಗ ವಾಪಸ್ ಬಂದು ಅಧಿಕಾರ ಸಿಕ್ಕರೂ ತವರು ಕ್ಷೇತ್ರದ ರಾಜಕೀಯದಿಂದ ದೂರವಾಗುತ್ತಿದ್ದಾರೆ.












Click it and Unblock the Notifications