ಇದು ನನ್ನ ಗೆಲುವಲ್ಲ, ಮತದಾರರ, ಸಿದ್ಧಾಂತದ ಗೆಲುವು: ಉಗ್ರಪ್ಪ
ಬಳ್ಳಾರಿ, ನವೆಂಬರ್ 06: 'ಯಾವ ಜನ್ಮದ ಋಣಾನುಬಂಧವೋ ಗೊತ್ತಿಲ್ಲ, ಬಳ್ಳಾರಿ ಜನತೆ ನನ್ನನ್ನು ಒಪ್ಪಿಕೊಂಡು, ಜಾತ್ಯಾತೀತ ಶಕ್ತಿಗೆ ಬಲ ತುಂಬಿದ್ದಾರೆ' ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಹೇಳಿದರು.
ಬೂತ್ ಮಟ್ಟದಿಂದ ರಾಷ್ಟ್ರಮಟ್ಟದ ನಾಯಕರು, ಜೆಡಿಎಸ್ ಮುಖಂಡರು, ಪ್ರಗತಿಪರರು, ಕಮ್ಯೂನಿಸ್ಟರು ಎಲ್ಲರ ಬೆಂಬಲ ಸಿಕ್ಕಿದ್ದರಿಂದ ಗೆಲುವು ಸಾಧ್ಯವಾಯಿತು.
ಇದಕ್ಕಿಂತ ಹೆಚ್ಚಾಗಿ, ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು, ಭಾರಿ ಅಂತರದಿಂದ ಗೆಲುವು ತಂದು ಕೊಟ್ಟ ಮತದಾರರಿಗೆ ನನ್ನ ಅನಂತಾನಂತ ಧನ್ಯವಾದಗಳು, ಇಲ್ಲಿನ ರೈತರ ಸಮಸ್ಯೆ, ಉದ್ಯೋಗ ಸಮಸ್ಯೆ ನಿವಾರಣೆಗಾಗಿ ಪ್ರಮಾಣಿಕವಾಗಿ ಪ್ರಯತ್ನ ಪಡುತ್ತೇನೆ ಎಂದರು.

ಜನವಿರೋಧಿ, ಸರ್ವಾಧಿಕಾರಿ ಪ್ರವೃತ್ತಿ ತೋರುವವರ ವಿರುದ್ಧ ಜಾತ್ಯಾತೀತವಾದಿಗಳ ಗೆಲುವು ಇದಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ. 1979ರಿಂದ ಇಲ್ಲಿ ತನಕದ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಭವಿಷ್ಯ ಸ್ಪಷ್ಟವಾಗಿದೆ.
ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಈಗ ಪೆಟ್ರೋಲ್ ದರ 86ರು, 75ರು ಗೆ ಡೀಸೆಲ್ ಇದೆ ಇದು ಇನ್ನೂ 20 ರು ಕಡಿಮೆ ಯಾಗಬೇಕಿದೆ. ಅಡುಗೆ ಅನಿಲ ಸಿಲಿಂಡರ್ 425-430ರು ಇದ್ದಿದ್ದು, 1000 ರು ತನಕ ಆಗಿದೆ. ಒಂದು ಚೀಲ ಗೊಬ್ಬರ 450ರು ಹೆಚ್ಚಾಗಿದೆ ಇದನ್ನು ಹೇಗೆ ಸರಿಪಡಿಸುತ್ತಾರೆ?
39000 ಕೋಟಿ ರಫೇಲ್ ಒಪ್ಪಂದ ಹಗರಣ, ಸುಪ್ರೀಂಕೋರ್ಟ್ ಜಡ್ಜ್ ಗಳು ಸಂವಿಧಾನಕ್ಕೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದ್ದಾರೆ. ಜಿ ಎಸ್ಟಿ, ನೋಟ್ ಬ್ಯಾನ್ ಜನರಿಗೆ ಸಮಸ್ಯೆ ತಂದಿದೆ ಎಂದರು.
ನಾಲ್ಕು ತಿಂಗಳ ಅವಧಿಗೆ ಮತ್ತೆ ಚುನಾವಣೆ ಬರಲಿದೆ. ಈ ಅವಧಿಯಲ್ಲಿ ಏನೆಲ್ಲ ಮಾಡಲು ಸಾಧ್ಯವಿದೆ, ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಲು, ಅಭಿಪ್ರಾಯ ಸಂಗ್ರಹಿಸಲು ಶ್ರಮಿಸುತ್ತೇನೆ ಎಂದಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ.












Click it and Unblock the Notifications