Get Updates
Get notified of breaking news, exclusive insights, and must-see stories!

Ballari: ತಮ್ಮನ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ ಜನಾರ್ಧನ ರೆಡ್ಡಿಗೆ ವಿಜಯ 'ಲಕ್ಷ್ಮಿ' ಒಲಿಯುತ್ತಾ?

ಭಾರತದ ರಾಜಕೀಯದಲ್ಲಿ ಸಾಮಾನ್ಯವಾಗಿ ಕುಟುಂಬ ರಾಜಕಾರಣದ ಬಗ್ಗೆ ಆಗಾಗ್ಗೆ ಹೆಚ್ಚು ಚರ್ಚೆಗಳಾಗುತ್ತಲೇ ಇರುತ್ತವೆ. ಬಹುತೇಕ ಒಂದು ಕುಟುಂಬ ಒಂದೇ ಪಕ್ಷಕ್ಕೆ ನಿಷ್ಟರಾಗಿರುತ್ತಾರೆ, ಆದರೆ ಕೆಲವು ಪ್ರಕರಣಗಳಲ್ಲಿ ಮಾತ್ರ ಒಂದೇ ಕುಟುಂಬದವರು ಬೇರೆ ಬೇರೆ ಪಕ್ಷಗಳಿಗೆ ನಿಷ್ಟರಾಗಿದ್ದು ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆ. ರಾಜ್ಯದಲ್ಲಿ ಬಂಗಾರಪ್ಪ ಮಕ್ಕಳಾದ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಬೇರೆ ಪಕ್ಷದಿಂದ ಕಣಕ್ಕಿಳಿಯುತ್ತಾರೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗಣಿ ನಾಡು ಬಳ್ಳಾರಿ ಕೂಡ ಕುಟುಂಬದ ನಡುವಿನ ಜಿದ್ದಾ ಜಿದ್ದಿಗೆ ಸಾಕ್ಷಿಯಾಗಲಿದೆ. ಒಂದು ಕಾಲದಲ್ಲಿ ಬಳ್ಳಾರಿಯಿಂದ ರಾಜ್ಯದ ರಾಜಕಾರಣವನ್ನೇ ಬದಲಿಸಿದ್ದ ಜನಾರ್ಧನ ರೆಡ್ಡಿ ಇಂದು ಅಸ್ತಿತ್ವ ಉಳಿಸಿಕೊಳ್ಳಲೂ ಪರದಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಜೈಲಿಗೆ ಹೋಗಿ ಬಂದಿರುವ ಜನಾರ್ಧನ ರೆಡ್ಡಿಯವರನ್ನು ಬಿಜೆಪಿ ಮೂಲೆಗುಂಪು ಮಾಡಿದ ಬಳಿಕ, ತಮ್ಮದೇ ಪಕ್ಷವನ್ನು ಕಟ್ಟಿದ್ದು, ಬಿಜೆಪಿಗೆ ಠಕ್ಕರ್ ಕೊಡುವ ವಿಶ್ವಾಸದಲ್ಲಿದ್ದಾರೆ.

Ballari : Will Janardhan Reddy wife Aruna Lakshmi win?

ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪ ಜಿಲ್ಲೆಗಳಿಗೆ ಪ್ರವೇಶಿಸದಂತೆ ಸುಪ್ರಿಂ ಕೋರ್ಟ್ ನಿರ್ಬಂಧ ವಿಧಿಸಿದೆ. ಇದೇ ಕಾರಣಕ್ಕೆ ಅವರು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ದಿಂದ ತಮ್ಮ ಪತ್ನಿ ಲಕ್ಷ್ಮಿ ಅರುಣಾರನ್ನು ಕಣಕ್ಕಿಳಿಸಿದ್ದಾರೆ.

ಜನಾರ್ಧನ ರೆಡ್ಡಿ ಬಿಜೆಪಿ ತೊರೆದರೂ ಅವರ ಸಹೋದರರಾದ ಜಿ.ಕರುಣಾಕರ ರೆಡ್ಡಿ ಮತ್ತು ಜಿ. ಸೋಮಶೇಖರ ರೆಡ್ಡಿ ಪಕ್ಷದಲ್ಲೇ ಉಳಿದಿದ್ದಾರೆ. ಬಳ್ಳಾರಿ ನಗರದಲ್ಲಿ ಜಿ. ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ತಮ್ಮನ ವಿರುದ್ಧವೇ ಜನಾರ್ಧನ ರೆಡ್ಡಿ ತಮ್ಮ ಪತ್ನಿ ಲಕ್ಷ್ಮಿ ಅರುಣಾರನ್ನು ಕಣಕ್ಕಿಳಿಸುವ ಮೂಲಕ ಗಣಿ ನಾಡಿನ ರಾಜಕೀಯ ಮತ್ತಷ್ಟು ರಂಗು ಪಡೆದುಕೊಂಡಿದೆ.

ಕ್ಷೇತ್ರದ ಹೊರಗಿದ್ದುಕೊಂಡೇ ಪತ್ನಿಯನ್ನು ಗೆಲ್ಲಿಸ್ತಾರ?

ಜನಾರ್ಧನ ರೆಡ್ಡಿ ಬಳ್ಳಾರಿಗೆ ಆಗಮಿಸಲು ನಿರ್ಬಂಧವಿದ್ದರೂ ಅಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವುದು ನಿಜ. ತಮ್ಮ ಪಕ್ಷದಿಂದಲೇ ಪತ್ನಿಯನ್ನು ನಿಲ್ಲಿಸಿರುವುದರಿಂದ ಅವರಿಗೆ ಈ ಚುನಾವಣೆ ಪ್ರತಿಷ್ಠೆಯೂ ಹೌದು. ಪಕ್ಷಕ್ಕೆ ನೆಲೆ ಒದಗಿಸುವ ನಿಟ್ಟಿನಲ್ಲಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರು ಇಲ್ಲಿ ಗೆಲ್ಲುವ ಪಣ ತೊಟ್ಟಿದ್ದಾರೆ.

ಲಕ್ಷ್ಮಿ ಅರುಣಾ ರಾಜಕೀಯಕ್ಕೆ ಹೊಸಬರಾಗಿದ್ದರೂ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಪತಿ ಕ್ಷೇತ್ರಕ್ಕೆ ಬರದ ಕಾರಣಕ್ಕೆ ಅವರು ನಾಮಪತ್ರ ಸಲ್ಲಿಕೆ ವೇಳೆ ಕಣ್ಣೀರು ಹಾಕಿದ್ದರು. ಈ ಅನುಕಂಪ ಅವರಿಗೆ ವರದಾನವಾದರೂ ಅಚ್ಚರಿ ಪಡಬೇಕಿಲ್ಲ. ಜನಾರ್ಧನ ರೆಡ್ಡಿ ಕೂಡ ತಮ್ಮ ಎಲ್ಲಾ ಪ್ರಭಾವ ಬಳಸಿ ಪತ್ನಿಯನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನ ಮಾಡೋದಂತು ನಿಜ.

ಲಕ್ಷ್ಮೀ ಅರುಣಾ ಗೆಲುವಿಗೆ ಇರುವ ಅಡ್ಡಿಯೇನು?

ಜನಾರ್ಧನ ರೆಡ್ಡಿ ಬಳ್ಳಾರಿಗೆ ಬರಲು ನಿರ್ಬಂಧ ಇರುವುದೇ ಲಕ್ಷ್ಮಿ ಅರುಣಾ ಅವರಿಗೆ ಇರುವ ದೊಡ್ಡ ಅಡ್ಡಿ ಎನ್ನಬಹುದು. ಅವರು ರಾಜಕೀಯದಲ್ಲಿ ಹೆಚ್ಚಿನ ಅನುಭವ ಇಲ್ಲದಿರುವುದು ಕೂಡ ಹಿನ್ನಡೆಗೆ ಕಾರಣವಾಗಬಹುದು. ಬಿಜೆಪಿ ಇಲ್ಲಿ ಇನ್ನೂ ಪ್ರಭಾವ ಉಳಿಸಿಕೊಂಡಿರುವುದು ಕೂಡ ಲಕ್ಷ್ಮಿ ಅವರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಬಳ್ಳಾರಿಯಲ್ಲಿ ಇದೇ ಮೊದಲ ಬಾರಿ ಜೆಡಿಎಸ್ ಕೂಡ ಗೆಲುವಿನ ಕನಸು ಕಾಣುತ್ತಿದೆ. ಮಾಜಿ ಶಾಸಕ ಅನಿಲ್ ಲಾಡ್ ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಸೋಮಶೇಖರ ರೆಡ್ಡಿ ಮತ್ತು ಲಕ್ಷ್ಮೀ ಅರುಣಾ ಇಬ್ಬರನ್ನು ಸೋಲಿಸುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಬಿಜೆಪಿ ಮತಗಳು ರೆಡ್ಡಿ ಕುಟುಂಬದ ಮಧ್ಯೆ ವಿಭಜನೆಯಾದರೆ ಅನಿಲ್ ಲಾಡ್ ಗೆದ್ದರೂ ಗೆಲ್ಲಬಹುದು. ಕಾಂಗ್ರೆಸ್‌ನಿಂದ ಇಲ್ಲಿ ನಾರಾ ಭರತ್ ರೆಡ್ಡಿ ಸ್ಪರ್ಧೆ ಮಾಡುತ್ತಿದ್ದಾರೆ.

ಕ್ಷೇತ್ರದ ಮತದಾರರ ವಿವರ

ಬಳ್ಳಾರಿ ನಗರ ಕ್ಷೇತ್ರದಲ್ಲಿ ಒಟ್ಟು 2,28,051 ಮತದಾರರನ್ನು ಹೊಂದಿದೆ. ಇಲ್ಲಿ ದಲಿತ ಮತದಾರರ ಪ್ರಾಬಲ್ಯವೇ ಹೆಚ್ಚಾಗಿದೆ. ವಾಲ್ಮೀಕಿ, ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳು ಕೂಡ ಹೆಚ್ಚಾಗಿದ್ದು ನಿರ್ಣಾಯಕವಾಗಲಿವೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ವಿರುದ್ಧ 16155 ಮತಗಳಿಂದ ಗೆಲುವು ಸಾಧಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+