Ballari: ಗಣಿನಾಡಿನಲ್ಲಿ ಲೋಕಸಭೆ ಚುನಾವಣಾ ಕಾವು; ಕಾಂಗ್ರೆಸ್, ಬಿಜೆಪಿ ಲೆಕ್ಕಾಚಾರಗಳೇನು?
ಗಣಿ ನಾಡು ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆ ಅಖಾಡ ಇನ್ನೂ ಅಷ್ಟಾಗಿ ಸದ್ದು ಮಾಡಿಲ್ಲವಾದರೂ, ಟಿಕೆಟ್ ಪಡೆಯಲು ಒಳಗೊಳಗೆ ಸಾಕಷ್ಟು ಪ್ರಯತ್ನಗಳಂತೂ ನಡೆಯುತ್ತಿವೆ. ಬಿಜೆಪಿ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.
ಬಿಜೆಪಿಯಿಂದ ಹಾಲಿ ಸಂಸದ ವೈ. ದೇವೇಂದ್ರಪ್ಪ ಅವರೇ ಮತ್ತೆ ಟಿಕೆಟ್ ಪಡೆಯುತ್ತಾರ ಅಥವಾ ಶ್ರೀರಾಮುಲು ಅವರಿಗೆ ಟಿಕೆಟ್ ಸಿಗುತ್ತಾ ಎನ್ನುವ ಕುತೂಹಲ ಇದೆ. ಕಾಂಗ್ರೆಸ್ನಲ್ಲಿ ಕೂಡ ಟಿಕೆಟ್ ಪಡೆಯಲು ಹಲವರು ಪೈಪೋಟಿ ನಡೆಸುತ್ತಿದ್ದು ಹೈಕಮಾಂಡ್ ಒಲವು ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಳ್ಳಾರಿ ಎಸ್ಟಿ ಮೀಸಲು ಕ್ಷೇತ್ರವಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿರುವ ವಿ.ಎಸ್. ಉಗ್ರಪ್ಪ ಅಥವಾ ವೆಂಕಟೇಶ್ ಪ್ರಸಾದ್ ಅವರಿಗೆ ಈ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಮೊದಲು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಬಳ್ಳಾರಿ, ಗಣಿಧಣಿಗಳೆಂದೇ ಖ್ಯಾತರಾದ ಜನಾರ್ಧನ ರೆಡ್ಡಿ, ಶ್ರೀರಾಮುಲು ಅವರು ಮುನ್ನಲೆಗೆ ಬಂದ ಬಳಿಕ ಬಿಜೆಪಿ ಬಲಿಷ್ಠವಾಗಿದೆ.
1999ರಲ್ಲಿ ದೇಶದ ಗಮನ ಸೆಳೆದಿದ್ದ ಬಳ್ಳಾರಿ
1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ದೇಶದ ಗಮನ ಸೆಳೆದ ಕ್ಷೇತ್ರವಾಗಿತ್ತು. ಕಾಂಗ್ರೆಸ್ನಿಂದ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದರೆ, ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ದರು. ರೋಚಕ ಹಣಾಹಣಿಯಲ್ಲಿ ಸೋನಿಯಾ ಗಾಂಧಿ ಗೆಲುವಿನ ನಗೆ ಬೀರಿದ್ದರು. ಆದರೆ ಸುಷ್ಮಾ ಸ್ವರಾಜ್ ಅವರ ಆಶೀರ್ವಾದ ಪಡೆದ ಜನಾರ್ಧನ ರೆಡ್ಡಿ ರಾಜಕೀಯದಲ್ಲಿ ಮುನ್ನಲೆಗೆ ಬಂದರು.
ಎಂಟು ವಿಧಾನಸಭಾ ಕ್ಷೇತ್ರಗಳು
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಎಂಟು ಕ್ಷೇತ್ರಗಳಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಈ ಬಾರಿ ಬಿಜೆಪಿಗೆ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.
ಹೂವಿನ ಹಡಗಲಿ (ಎಸ್ಸಿ), ಹಗರಿಬೊಮ್ಮನಹಳ್ಳಿ (ಎಸ್ಸಿ), ವಿಜಯನಗರ, ಕಂಪ್ಲಿ (ಎಸ್ಟಿ), ಬಳ್ಳಾರಿ (ಎಸ್ಟಿ), ಬಳ್ಳಾರಿ ನಗರ, ಸಂಡೂರು (ಎಸ್ಟಿ), ಕುಡ್ಲಿಗಿ (ಎಸ್ಟಿ) ವಿಧಾನಸಭಾ ಕ್ಷೇತ್ರಗಳು ಬಳ್ಳಾರಿ ಲೋಕಸಭಾ ವ್ಯಾಪ್ತಿಗೆ ಬರುತ್ತವೆ.
2019ರ ಚುನಾವಣಾ ಫಲಿತಾಂಶ
2019ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯ ವೈ.ದೇವೇಂದ್ರಪ್ಪ 55,707 ಮತಗಳ ಅಂತರದಿಂದ ಐಎನ್ಸಿಯ ವಿ.ಎಸ್.ಉಗ್ರಪ್ಪ ಅವರನ್ನು ಸೋಲಿಸಿದ್ದರು. ದೇವೇಂದ್ರಪ್ಪ 6,16,388 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ 5,60,681 ಮತಗಳನ್ನು ಪಡೆದಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 69.59% ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಈ ಬಾರಿ ಕೂಡ ಬಳ್ಳಾರಿಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ ಇರಲಿದೆ. 6 ಶಾಸಕರನ್ನು ಹೊದಿರುವ ಕಾಂಗ್ರೆಸ್ಗೆ ಈ ಬಾರಿ ಗೆಲುವಿನ ಸಾಧ್ಯತೆ ಇದ್ದರೂ, ಮೋದಿ ಹೆಸರಿನಲ್ಲಿ ಬಿಜೆಪಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಸ್ಥಳೀಯ ನಾಯಕತ್ವ, ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡಿದೆ.












Click it and Unblock the Notifications