ಎಂಟು ತಿಂಗಳ ಅಜ್ಞಾತವಾಸ ಹ್ಯಾಟ್ರಿಕ್ ಗೆಲುವಿನಿಂದ ಅಂತ್ಯ
ಬಳ್ಳಾರಿ, ಮೇ 16 : ಹೊಸಪೇಟೆ ವಿಜಯನಗರ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಆನಂದ್ ಸಿಂಗ್ ಅವರು ಸುಮಾರು 8 ತಿಂಗಳ ನಂತರ ತಮ್ಮ ಸ್ವಂತ ಮನೆಗೆ ಹೋಗಿ, ರಾಜಕೀಯ ಇತಿಹಾಸದಲ್ಲೇ ಹೊಸ ಭಾಷ್ಯ ಬರೆದಿದ್ದಾರೆ.
ಹಾಗಾದರೆ ಎಂಟು ತಿಂಗಳ ಕಾಲ ಆನಂದಸಿಂಗ್ ಎಲ್ಲಿದ್ದರು? ಏನು ಮಾಡಿದರು? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಎಂಟು ತಿಂಗಳ ಹಿಂದೆ ಆನಂದ್ ಸಿಂಗ್ ಒಂದು ಶಪಥ ಮಾಡಿದ್ದರು. ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಸಮಾವೇಶದಲ್ಲಿ ಆನಂದ್ ಸಿಂಗ್ ಮಾತನಾಡುವಾಗ, ಇಂದಿನಿಂದ ನಾನು ಚುನಾವಣೆ ಮುಗಿಯುವರೆಗೂ ನನ್ನ ಮನೆ ಬಾಗಿಲು ತುಳಿಯುವುದಿಲ್ಲ.

ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಂಪರ್ಕ ಬೆಳೆಸುವೆ. ಕ್ಷೇತ್ರದ ಕೊರತೆಗಳ ಅಧ್ಯಯನ ನಡೆಸುವೆ. ಚುನಾವಣೆ ಮುಗಿದ ಮೇಲೆ ನಾನು ನನ್ನ ಮನೆಗೆ ಹೋಗುತ್ತೇನೆ ಎಂದು ಶಪಥ ಮಾಡಿದ್ದರು.
ಈ ಶಪಥ ಮಾಡಲು ಕಾರಣ ಆನಂದ್ ಸಿಂಗ್ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಬಿಜೆಪಿಯಿಂದ ಗೆಲುವು ಪಡೆದ ನಂತರ ಕೆಲ ದಿನಗಳು ಮಾತ್ರ ಕ್ಷೇತ್ರದಲ್ಲಿ ಇದ್ದರು. ನಂತರ ಬೆಲಿಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಮನೆವಾಸ ಅನುಭವಿಸಿ, ಕ್ಷೇತ್ರದಿಂದ ಕೆಲ ತಿಂಗಳ ಕಾಲ ದೂರ ಇದ್ದರು.
ಆಗ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು ಎಂದು ಸಾಮಾನ್ಯ ಅಭಿಪ್ರಾಯ ಮೂಡಿತ್ತು. ಆಗ, ಸೆರೆಮನೆವಾಸ ಮುಗಿಸಿ ಹೊರ ಬಂದ ನಂತರ ಕೆಲದಿನಗಳ ಕಾಲ ಕ್ಷೇತ್ರದಲ್ಲಿ ಸಂಚರಿಸಿ ಕೆಲ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದರು.

ಆನಂದ್ ಸಿಂಗ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರೂ ಮಾಡಿದ್ದ ಶಪಥ ನೆನಪಿನಲ್ಲಿಟ್ಟುಕೊಂಡು ಅಕ್ಟೋಬರ್ ನಿಂದ ಮೇ ತಿಂಗಳವರೆಗೆ 8 ತಿಂಗಳ ಕಾಲ ತಮ್ಮ ಮನೆಗೆ ಹೋಗದೆ, ಕೆಲ ದಿನಗಳ ಕಾಲ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ನಂತರ ಗ್ರಾಮ ವಾಸ್ತವ್ಯವನ್ನು ಅನೇಕ ದಿನಗಳ ಕಾಲ ನಡೆಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಒಂದು ರೂಮ್ ಬಾಡಿಗೆ ತೆಗೆದುಕೊಂಡು ಚುನಾವಣೆ ಮುಗಿಯವರೆಗೂ ಹೋಟೆಲ್ ನಲ್ಲಿ ತಂಗಿದ್ದರು. ಮಂಗಳವಾರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆನಂದ್ ಸಿಂಗ್ ಅವರು ತಮ್ಮ ಸ್ವಂತ ಮನೆಗೆ ತೆರಳಿದರು. ಆನಂದ್ ಸಿಂಗ್ ಹ್ಯಾಟ್ರಿಕ್ ಗೆಲುವು ಸಾಧಿಸಿ, ಮನೆಗೆ ಬಂದ ಕಾರಣ ಆರತಿ ಬೆಳಗಿ, ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಸಿಂಗ್, ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಪ್ರಮಾಣದ ಮತಗಳ ಗೆಲುವಿನ ಅಂತರ ಬಂದಿಲ್ಲ. ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು, ಮೂರನೇ ಬಾರಿಗೂ ಆಯ್ಕೆ ಮಾಡಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ ಜನರ ಮತ್ತು ಕ್ಷೇತ್ರ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಮತ್ತು ಶಕ್ತಿಮೀರಿ ಶ್ರಮಿಸುವೆ ಎಂದರು.












Click it and Unblock the Notifications