ಸಿದ್ದರಾಮಯ್ಯ ಸೋತು ಮನೆ ಸೇರಿದ್ಮೇಲೆ ರಾಜ್ಯಕ್ಕೆ ಅಚ್ಛೇದಿನ್: ಬಿಎಸ್ ವೈ
ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ), ಜನವರಿ 4: "ಸಿದ್ದರಾಮಯ್ಯನವರೇ ಗುಜರಾತ್ ನಲ್ಲಿ ನೆಗೆದುಬಿದ್ದು ಹೋದ್ರಿ, ಹಿಮಾಚಲ ಪ್ರದೇಶದಲ್ಲಿ ನಿಮ್ಮ ಸರಕಾರ ಇತ್ತು. ಅಡ್ರೆಸ್ ಇಲ್ಲದಂತೆ ಆಗಿಹೋದ್ರಿ. ಇನ್ನೆಲ್ಲಿ ಇದೀರಿ? ಈ ವಿಧಾನಸಭೆ ಚುನಾವಣೆಯಲ್ಲಿ ಮನೆಗೆ ಹೋಗ್ತೀರಿ. ಯಾವಾಗ ಅಚ್ಛೇ ದಿನ್ ಬರುತ್ತದೆ ಅಂತ ಕೇಳ್ತೀರಲ್ಲಾ, ನೀವು ಮನೆಗೆ ಹೋದ ಮೇಲೆ ಅಚ್ಛೇ ದಿನ್ ಬರುತ್ತದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಿದ್ದರಾಮಯ್ಯಗೆ ಕಾರ್ಖಾನೆ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ: ಬಿಎಸ್ ವೈ
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಅರವತ್ತೈದು ಕೇಸ್ ಗಳನ್ನು ಹಾಕಿದ್ದೀವಿ. ಆದರೆ ಅದೆಲ್ಲ ಮುಚ್ಚಿ ಹಾಕಲು ಪ್ರಯತ್ನ ಮಾಡಿ, ಸಿಐಡಿಯಿಂದ ಕ್ಲೀನ್ ಚಿಟ್ ಪಡೆಯಲು ಯತ್ನಿಸುತ್ತಿದ್ದೀರಿ. ನಾವು ಮತ್ತೆ ಅಧಿಕಾರಕ್ಕೆ ಬಂದು ಯಾರನ್ನು ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸುತ್ತೇವೆ ಎಂದರು.
ಈಚೆಗೆ ಸರಕಾರಿ ಯಂತ್ರ ಬಳಸಿದರೂ ಸಿದ್ದರಾಮಯ್ಯ ಅವರಿಗೆ ಈ ಸ್ಥಳದಲ್ಲಿ ಐದು ಸಾವಿರ ಜನರನ್ನು ಸೇರಿಸಲು ಸಾಧ್ಯವಾಗಲಿಲ್ಲ. ಆದರೆ ಈ ದಿನ ಅದೆಷ್ಟು ಮಂದಿ ಸೇರಿದ್ದೀರಿ ಎಂಬುದು ನಮ್ಮ ಮೇಲಿನ ಪ್ರೀತಿಗೆ ಸಾಕ್ಷಿ. ನಾನು ಹಸಿರು ಶಾಲು ಹಾಕಬಾರದು ಅಂತ ಸಿದ್ದರಾಮಯ್ಯ ಹೇಳ್ತಾರೆ. ಈ ಹಸಿರು ಶಾಲು ಹಾಕಿದ ನಂತರವೇ ಮುಖ್ಯಮಂತ್ರಿಯಾದೆ. ರೈತರಿಗೆ ಅನುಕೂಲ ಕಲ್ಪಿಸಿದೆ ಎಂದರು.
ಹಣ ಬಲ, ತೋಳ್ಬಲ, ಜಾತಿಯ ವಿಷ ಬೀಜ ಬಿತ್ತಿ, ಹೆಂಡ ಹಂಚಿ ಗೆಲ್ಲಬಹುದು ಎಂಬ ನಂಬಿಕೆ ಇದ್ದರೆ ಅದನ್ನು ಬಿಟ್ಟುಬಿಡಿ. ನೀವು ಕೊಡುವ ಎರಡು ಸಾವಿರಕ್ಕೆ ಯಾರೂ ಮತ ಹಾಕಲ್ಲ. ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ನಂಬರ್ ಒಂದನೇ ಸ್ಥಾನಕ್ಕೆ ತಂದುಬಿಟ್ಟಿರಿ ಎಂದು ಟೀಕಿಸಿದರು.
ಈಚೆಗೆ ಟೈಮ್ಸ್ ಆಫ್ ಇಂಡಿಯಾದಿಂದ ನಡೆದ ಸಮೀಕ್ಷೆಯಲ್ಲಿ ಬಯಲಾಗಿದೆ. ದೇಶದ ಶೇಕಡಾ ಎಪ್ಪತ್ತೊಂಬತ್ತು ಮಂದಿ ಮೋದಿಯವರನ್ನೇ ಪ್ರಧಾನಿ ಆಗಲು ಬಯಸಿದ್ದಾರೆ ಎಂದರು.
ನರೇಂದ್ರ ಮೋದಿಯವರ ಕಾಲಿಗೆ ಬಿದ್ದಾದರೂ ಸರಿ, ನೀರಾವರಿ ಯೋಜನೆಗಳಿಗೆ ಹಣವನ್ನು ತರುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.