ಹೊಸ ಜಿಲ್ಲೆ ವಿಜಯನಗರಕ್ಕೆ ಹಲವು ಹೊಸ ಕೊಡುಗೆಗಳ ಘೋಷಣೆ
ವಿಜಯನಗರ, ಆಗಸ್ಟ್ 15; ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯಲ್ಲಿ ಮೊಟ್ಟ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಆನಂದ್ ಸಿಂಗ್ ಧ್ವಜಾರೋಹಣ ಮಾಡಿದರು.
ಭಾನುವಾರ 75ನೇ ಸ್ವಾತಂತ್ರ್ಯಾ ದಿನಚಾರಣೆ ಅಂಗವಾಗಿ ತ್ರಿವರ್ಣ ಧ್ವಜಾರೋಹಣ ನೇರವೇರಿಸಲಾಯಿತು. ನಂತರ ನಗರದ ವಡಕಾರಾಯ ದೇವಾಲಯದಿಂದ ತರಲಾಗಿದ್ದ ಜ್ಯೋತಿಯನ್ನು ಮೈದಾನದಲ್ಲಿ ಬೆಳಗಿಸಲಾಯಿತು. ಬಳಿಕ ಪರೇಡ್ ಕಮಾಂಡರ್ ಗೋವಿಂದ ನೇತೃತ್ವದ ವಿವಿಧ ತುಕಡಿಗಳಿಂದ ಗೌರವ ವಂದನೆಯನ್ನು ಸಚಿವರು ಸ್ವೀಕರಿಸಿದರು.
ಧ್ವಜಾರೋಹಣದ ಬಳಿಕ ಮಾತನಾಡಿದ ಆನಂದ್ ಸಿಂಗ್, "ಹಂಪಿ ಬಳಿಯ ಕಮಲಾಪುರ ಸಮೀಪದ 50 ಎಕರೆ ಪ್ರದೇಶದಲ್ಲಿ ಫಿಲ್ಮ್ ಸಿಟಿ ನಿರ್ಮಿಸಲಾಗುವುದು. ನಗರದಲ್ಲಿ 100 ಕೋಟಿಯಲ್ಲಿ 50 ಎಕರೆಯಲ್ಲಿ ಎತ್ತಿನಗಾಡಿ, ಕುಸ್ತಿ, ಗದ್ದೆ ಓಟ, ಕಬಡ್ಡಿ, ರಂಗೋಲಿ ಸ್ಪರ್ಧೆ, ಖೋ ಖೋ, ಕ್ರಿಕೆಟ್, ಜಂಪ್ರೋಪ್, ಫುಟ್ಬಾಲ್, ಬಾಸ್ಕೆಟ್ಬಾಲ್ ಆಡುವುದಕ್ಕೆ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಿಸಲಾಗುವುದು" ಎಂದು ಹೇಳಿದರು.
"ತುಂಗಭದ್ರಾ ಸ್ಟೀಲ್ಸ್ ಪ್ರಾಡಕ್ಟ್ಗೆ (ಟಿಎಸ್ಪಿ) ಸೇರಿದ 83 ಎಕರೆ ಜಾಗದ ಪೈಕಿ 30 ಎಕರೆಯಲ್ಲಿ 250 ಹಾಸಿಗೆ ಸೌಲಭ್ಯವುಳ್ಳ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗುವುದು. ಬರುವ ದಿನಗಳಲ್ಲಿ ಅದೇ ಪರಿಸರದಲ್ಲಿ ಮೆಡಿಕಲ್ ಕಾಲೇಜು ಸಹ ನಿರ್ಮಿಸಲಾಗುವುದು" ಎಂದು ಆನಂದ್ ಸಿಂಗ್ ಘೋಷಣೆ ಮಾಡಿದರು.

ಜಿಲ್ಲಾಡಳಿತ ಭವನ ನಿರ್ಮಾಣ
"ವಿಜಯನಗರ ನಗರ ಜಿಲ್ಲೆಗೆ ಸುಸಜ್ಜಿತವಾದ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗುತ್ತದೆ. ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ನಿರ್ಮಾಣ, ಅಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದೆ. 100 ಕೋಟಿ ಅನುದಾನ ಕೊಡುವಂತೆ ಪ್ರಸ್ತಾವ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆಯು ಈಗಾಗಲೇ 50 ಕೋಟಿ ಬಿಡುಗಡೆಗೊಳಿಸಿದೆ" ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
"ಅನಂತಶಯನಗುಡಿ ಬಳಿ ರೈಲ್ವೆ ಮೇಲು ಸೇತುವೆ ನಿರ್ಮಿಸಲಾಗುವುದು. ಜಿಲ್ಲಾ ಖನಿಜ ನಿಧಿಯಿಂದ ಈಗಾಗಲೇ 15 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಪ್ರತಿ ವರ್ಷ 150 ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು" ಎಂದರು.

ಕೇಂದ್ರಿಯ ವಿಶ್ವವಿದ್ಯಾಲಯ ನಿರ್ಮಾಣ
"ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೇವಲ ಸಂಶೋಧನೆಗೆ ಸೀಮಿತವಾಗಿದೆ. ಅದಕ್ಕೆ ಸೇರಿದ 750 ಎಕರೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಿಸಿ, ಅದನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ನಮ್ಮ ಭಾಗದಲ್ಲಿ ಗಿಡಮೂಲಿಕೆಗಳು ಹೆಚ್ಚಾಗಿ ಬೆಳೆಯುತ್ತವೆ. ತುಂಗಭದ್ರಾ ಜಲಾಶಯದ ಹಿನ್ನೀರಿನ ಸದುಪಯೋಗ ಪಡೆದು, ಆಯುರ್ವೇದ, ಕೃಷಿ ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜು ನಿರ್ಮಿಸಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
"4 ಕೋಟಿಯಲ್ಲಿ ನಗರದಲ್ಲಿ ಸುಸಜ್ಜಿತ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗುವುದು. 24 ಕೋಟಿ ವೆಚ್ಚದಲ್ಲಿ ಬಾಲಕಿಯರ ಪ್ರೌಢಶಾಲೆ, ಜೂನಿಯರ್ ಕಾಲೇಜು ನಿರ್ಮಿಸಲಾಗುವುದು. 18 ಕೋಟಿಯಲ್ಲಿ ಟಿ. ಬಿ. ಡ್ಯಾಂ ವೃತ್ತದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ಮೂಲಕ ವಾಲ್ಮೀಕಿ ವೃತ್ತಕ್ಕೆ ರಸ್ತೆ ನಿರ್ಮಿಸಲಾಗುವುದು. 24 ಕೋಟಿ ವೆಚ್ಚದಲ್ಲಿ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ಪ್ರವಾಸಿ ತಾಣವಾಗಿ ಮಾಡಲಾಗುತ್ತದೆ" ಎಂದು ಹೇಳಿದರು.

ಸಾಮಾಮಾಜಿಕ ಅಂತರ ಮಾಯ
75ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಧ್ವಜಾಹರೋಣ ನೇರವೇರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಲಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ ಇದನ್ನು ಹಲವಾರು ಜನರು ಪಾಲನೆ ಮಾಡಲಿಲ್ಲ.

100 ಅಡಿ ತ್ರಿವರ್ಣ ಧ್ವಜ ಸ್ತಂಭ
ಹೊಸಪೇಟೆ ನಗರದ ಹೊರವಲಯದಲ್ಲಿರಯವ ಐತಿಹಾಸಿಕ ಜೋಳದ ರಾಶಿ ಗುಡ್ಡದಲ್ಲಿ ಸಚಿವ ಆನಂದ್ ಸಿಂಗ್ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್ ಧ್ವಜಾರೋಹ ಮಾಡಿದರು. ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ ಪಿ. ಶ್ರವಣ್, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಮುಂತಾದವರಿದ್ದರು.












Click it and Unblock the Notifications