ಅಪಾಯಮಟ್ಟ ಮೀರಿದ ಮಲಪ್ರಭಾ-ಘಟಪ್ರಭಾ, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ
ಬಾಗಲಕೋಟೆ, ಸೆಪ್ಟೆಂಬರ್ 13: ನವಿಲು ತೀರ್ಥ ನದಿಗೆ ಜಲಾಶಯದಿಂದ 12,500 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ನದಿ ಪಾತ್ರದ ಸುಮಾರು 60ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಮಲಪ್ರಭಾ ನದಿ ತೀರದ ಬಾದಾಮಿಯಲ್ಲೂ ಕೆಲವು ಗ್ರಾಮಗಳಿಗೆ ಪ್ರವಾಹದ ಭೀತಿ ಇರುವುದರಿಂದ ಸುರಕ್ಷಿತ ಸ್ಥಳಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮಲಪ್ರಭಾ ತೀರದ ಗ್ರಾಮಸ್ಥರು, ಜನ, ಜಾನುವಾರುಗಳು ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ಸುರಕ್ಷಿತ ತಾಣಕ್ಕೆ ತೆರಳುವಂತೆ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕರ ಮೂಲಕ ಮನವಿ ಮಾಡಿಸಿದ್ದಾರೆ. ಅಲ್ಲದೆ ಸ್ಥಳ ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮ, ಅಗತ್ಯ ಸೌಕರ್ಯ ಕಲ್ಪಿಸಲು ಅದಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಲಪ್ರಭಾ ಜೊತೆಗೆ ಘಟಪ್ರಭಾ ನದಿಯಲ್ಲಿ 52 ಸಾವಿರ ಕ್ಯೂಸೆಕ್ ಹರಿಯುತ್ತಿದ್ದು, ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲೂಕಿನಲ್ಲಿ ಪ್ರವಾಹ ಭೀತಿ ಹೆಚ್ಚಿಗಿದೆ. ನದಿ ತೀರದ 69 ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ರಬಕವಿಬನಹಟ್ಟಿ ತಾಲ್ಲೂಕಿನ ಡವಳೇಶ್ವರ ಗ್ರಾಮದ ಬಳಿ ಇರುವ ಸೇತುವೆ ಜಲಾವೃತಗೊಂಡಿದೆ. ಮುಧೋಳ ತಾಲೂಕಿನ ಕೆಲ ಬ್ರಿಡ್ಜ್ ಕಂ ಬ್ಯಾರೇಜ್ ಜಲಾವೃತಗೊಂಡಿವೆ. ಮಿರ್ಜಿ, ಚನ್ನಾಳ, ಜಾಲಿಬೇರ, ಜೀರಗಾಳ, ಇಂಗಳಗಿ, ಜಂಬಗಿ ಕೆಡಿ, ಕಸಬಾ ಜಂಬಗಿಯಲ್ಲಿ ಸೇತುವೆಗಳು ಮುಳುಗಿವೆ.

ಘಟಪ್ರಭಾ ನದಿ ಅಬ್ಬರಕ್ಕೆ ಮಿರ್ಜಿ ಘಟಪ್ರಭಾ ಸೇತುವೆ ಜಲಾವೃತಗೊಂಡಿದ್ದು, ಸೇತುವೆ ನೇಲೆ ಐದು ಅಡಿಯಷ್ಟು ನೀರು ಹರಿಯುತ್ತಿದ್ದು, ಮಿರ್ಜಿ ಮಹಾಲಿಂಗಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ನದಿ ನೀರಿನಿಂದ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಜಲಾವೃತವಾಗಿವೆ. 60 ಸಾವಿರ ಕ್ಯೂಸೆಕ್ ಗಿಂತ ಹೆಚ್ಚು ನೀರು ನದಿಗೆ ಬಿಟ್ಟರೆ ಮುಧೋಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.
ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ
ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರಿನ ಐತಿಹಾಸಿಕ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಕೂಡ ಜಲದಿಗ್ಬಂಧನವಾಗಿದೆ. ದೇವಸ್ಥಾನದ ಆವರಣದಲ್ಲಿ 6 ರಿಂದ 7 ಅಡಿ ವರೆಗೆ ನೀರು ನಿಂತಿದೆ. ಮುಂಜಾಗೃತ ಕ್ರಮವಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ದೇವಸ್ಥಾನ ಜಲಾವೃತ ಹಿನ್ನೆಲೆ ಹೊರಗಡೆ ಈಶ್ವರಲಿಂಗಕ್ಕೆ ಪೂಜಾರಿಗಳು ಪೂಜೆ ಸಲ್ಲಿಸುತ್ತಿದ್ದಾರೆ.

ಘಟಪ್ರಭಾ ನದಿಗೆ ಓರ್ವ ಯುವಕ ಬಲಿ
ಪಂಪ್ ಸೆಟ್ ತರಲು ಹೋಗಿ ಘಟಪ್ರಭಾ ನದಿ ಹಿನ್ನೀರಲ್ಲಿ ಮುಳುಗಿ ವಿಜಯ್ ಬಿರಾದಾರ(19) ಎಂಬ ಯುವಕ ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮುಧೋಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಶವವನ್ನು ಪತ್ತೆ ಮಾಡಲಾಗಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಬೆಳಗಾವಿ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ, ಕೃಷ್ಣಾ ನದಿ ಸೇರಿದಂತೆ ಸಪ್ತ ನದಿಗಳು ಹರಿಯುತ್ತವೆ. ಇದರಿಂದ ಬೆಳಗಾವಿ ಜಲಸಂಕಷ್ಟದಲ್ಲಿ ಮುಳುಗಿದೆ. ಜಿಲ್ಲೆಯಲ್ಲಿ 19 ಸಂಪರ್ಕ ಸೇತುವೆಗಳು ಮುಚ್ಚಿಹೋಗಿವೆ.












Click it and Unblock the Notifications