ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್, ಬಿಜೆಪಿ ಬಲಾಬಲವೇನು?
ಬಾಗಲಕೋಟೆ, ಅಕ್ಟೋಬರ್ 29 : ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಅನುಕಂಪದ ಅಲೆಯ ಮೇಲೆ ಚುನಾವಣೆ ನಡೆಯುತ್ತಿದ್ದು, ಯಾರಿಗೆ ಗೆಲುವು ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಉಪ ಚುನಾವಣೆ ಎದುರಾಗಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಜಮಖಂಡಿ ಉಪ ಚುನಾವಣೆ : ಬಿಜೆಪಿ, ಕಾಂಗ್ರೆಸ್ನಿಂದ ಅನುಕಂಪದ ಅಸ್ತ್ರ!
ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಕ್ಷೇತ್ರವನ್ನು ಉಳಿಸಿಕೊಳ್ಳುವ ಪಣ ತೊಟ್ಟಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 2795 ಮತಗಳ ಅಂತರದಲ್ಲಿ ಸೋತಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಜಮಖಂಡಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಆಸ್ತಿ ವಿವರ
ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಸೇರಿ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದ್ದು, ಎರಡೂ ಪಕ್ಷದ ಅಭ್ಯರ್ಥಿಗಳ ಬಲಾಬಲವೇನು? ಎಂಬುದನ್ನು ಚಿತ್ರಗಳಲ್ಲಿ ನೋಡಿ....
ಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿ
ಅನುಕಂಪದ ಅಲೆ
ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಕಂಪದ ಅಲೆ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅನುಕಂಪದ ಅಲೆಯ ಅಸ್ತ್ರವನ್ನು ಪ್ರಯೋಗಿಸಿವೆ.
ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದ ಅನುಕಂಪ ಪುತ್ರ ಆನಂದ್ ನ್ಯಾಮಗೌಡ ಅವರಿಗೆ ಸಹಾಯಕವಾಗಲಬಹುದು. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ 2008ರಲ್ಲಿ ಶಾಸಕರಾಗಿದ್ದರು. ಆದರೆ, 2013, 2018ರ ಚುನಾವಣೆಯಲ್ಲಿ ಸೋತಿದ್ದಾರೆ. ಈ ಅನುಕಂಪ ಉಪ ಚುನಾವಣೆಯಲ್ಲಿ ಸಹಾಯಕವಾಗುವ ನಿರೀಕ್ಷೆ ಇದೆ.
ತಂದೆಯ ಹೆಸರೇ ಬಲ
ಆನಂದ್ ನ್ಯಾಮಗೌಡ ಅವರು ರಾಜಕೀಯಕ್ಕೆ ಹೊಸಬರು. ಶ್ರೀಕಾಂತ್ ಕುಲಕರ್ಣಿ ಅವರಿಗೆ ಹೋಲಿಕೆ ಮಾಡಿದರೆ ರಾಜಕೀಯ ಅನುಭವ ಇಲ್ಲ. ಆದರೆ, ತಂದೆ ಸಿದ್ದುನ್ಯಾಮಗೌಡ ಅವರು ಮಾಡಿದ ಕೆಲಸಗಳು, ಯುವಕ ಎನ್ನುವ ಅಂಶ, ಪಕ್ಕದ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಾಗಿರುವುದು ಬಲವಾಗಿದೆ.
ಶ್ರೀಕಾಂತ್ ಕುಲಕರ್ಣಿ
ಮೇ ತಿಂಗಳಿನಲ್ಲಿ ನಡೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 2,795 ಮತಗಳ ಅಂತರದಲ್ಲಿ ಶ್ರೀಕಾಂತ್ ಕುಲಕರ್ಣಿ ಸೋತಿದ್ದರು. ಈಗ ಉಪ ಚುನಾವಣೆಯಲ್ಲಿ ಆ ಸೇಡನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಮಾಜಿ ಶಾಸಕರು, ಯಡಿಯೂರಪ್ಪ ಆಪ್ತರು, ಆರ್ಎಸ್ಎಸ್ ಹಿನ್ನಲೆಯವರು ಎಂಬ ಅಂಶಗಳು ಶ್ರೀಕಾಂತ ಕುಲಕರ್ಣಿ ಅವರಿಗೆ ಸಹಾಯಕವಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಬಿಜೆಪಿಯ ಸಂಗಮೇಶ್ ನಿರಾಣಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮತ ವಿಭಜನೆ ಮಾಡಿದ್ದರು. ಆ ಭಾರಿ ಎಲ್ಲರೂ ಒಂದಾಗಿದ್ದು, ಮತಗಳು ಭದ್ರವಾಗಿವೆ.
ಪ್ರಮುಖ ನಾಯಕರ ಭರ್ಜರಿ ಪ್ರಚಾರ
ಜಮಖಂಡಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಬಲ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಇದು ಎರಡೂ ಪಕ್ಷಗಳಿಗೆ ಸಹಾಯಕವಾಗುವ ನಿರೀಕ್ಷೆ ಇದೆ.
ಬಿ.ಎಸ್.ಯಡಿಯೂರಪ್ಪ ಖುದ್ದು ಜಮಖಂಡಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಮೈಸೂರು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಪ್ರಚಾರ ಮಾಡುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರದ ಜಾತಿ ಲೆಕ್ಕಾಚಾರ
ಜಮಖಂಡಿ ಕ್ಷೇತ್ರದಲ್ಲಿ 198957 ಮತದಾರರು ಇದ್ದಾರೆ. ಪಂಚಮಸಾಲಿ ಲಿಂಗಾಯತರು, ಕುರುಬರು, ಮುಸ್ಲಿಂಮರು ನಿರ್ಣಾಯಕರಾಗಿದ್ದಾರೆ.