ಬಾಗಲಕೋಟೆ : ಪ್ರವಾಹ ಸಂತ್ರಸ್ತರಿಗೆ 30 ಸಾವಿರ ಆಹಾರ ಕಿಟ್
ಬಾಗಲಕೋಟೆ, ಆಗಸ್ಟ್ 13 : ಬಾಗಲಕೋಟೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ 30 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುತ್ತದೆ. ಕೃಷ್ಣಾ ನದಿ ಪ್ರವಾಹದಿಂದ ಸಾವಿರಾರು ಜನರು ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಈ ಕುರಿತು ಮಾಹಿತಿ ನೀಡಿದರು. "ಜಿಲ್ಲೆಯಲ್ಲಿ ನೆರೆಹಾನಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾಗಿರುವ ಸಂತ್ರಸ್ಥರು ತಮ್ಮ ಗೃಹಕ್ಕೆ ಹಿಂದಿರುಗಿದ ನಂತರ 30 ಸಾವಿರ ಕುಟುಂಬಗಳಿಗೆ ವಿಶೇಷ ಆಹಾರ ಕಿಟ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ" ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಕಿಟ್ನಲ್ಲಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, 1 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಆಯೋಡಿನ್ ಯುಕ್ತ ಉಪ್ಪು, 1 ಲೀಟರ್ ತಾಳೆ ಎಣ್ಣೆ ಹಾಗೂ 5 ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತದೆ.

ಈ ಆಹಾರದ ಕಿಟ್ಗಳನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಸಂತ್ರಸ್ಥರ ಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಕರ್ನಾಟಕದಲ್ಲಿ ಪ್ರವಾಹದಿಂದ 17 ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತರಾಗಿರುವ ಜನರಿಗೆ ನೆರವಿನ ಮಾಹಾಪೂರ ಹರಿದು ಬರುತ್ತಿದೆ. ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಿಂದ ಮತ್ತು ವೈಯಕ್ತಿಕವಾಗಿಯೂ ಆಹಾರ ಪದಾರ್ಥ ಮತ್ತು ಬಟ್ಟೆಗಳನ್ನು ಉದಾರ ಮನಸ್ಸಿನಿಂದ ಜನರು ನೀಡುತ್ತಿದ್ದಾರೆ.
150 ಕೆಜಿ ಅಕ್ಕಿ, 20 ಕೆಜಿ ಜೋಳದಹಿಟ್ಟು, 10 ಕೆಜಿ ರವಾ, 300 ರೊಟ್ಟಿ, 10 ಬಾಕ್ಸ್ ಬಿಸ್ಕತ್, ಬ್ರೇಡ್, ನೀರಿನ ಬಾಟಲ್, ಉಪ್ಪಿನಕಾಯಿ, ಉಪ್ಪು, ಖಾರಾ, ಸಕ್ಕರೆ, ಶೇಂಗಾಚಟ್ನಿ, ಮೆಡಿಕಲ್ ಕಿಟ್, ಗೋಧಿ ಹಿಟ್ಟು, ಸೋಪು, ಬ್ರೇಶ್, ಸ್ಯಾನಿಟರಿನ್ಯಾಪ್ ಕಿನ್, ಚಿಕ್ಕಮಕ್ಕಳ ಬಟ್ಟೆ, ಟೀಶರ್ಟ್, ಸೀರೆ, ಚೂಡಿದಾರ, ಟವೆಲ್, ಚಾಪೆ, ಹಾಸಿಗೆ-ಹೋದಿಕೆ ಇನ್ನು ಮುಂತಾದ ಪದಾರ್ಥಗಳನ್ನು ಜನರು ನೀಡಿದ್ದಾರೆ.












Click it and Unblock the Notifications