17 ತಿಂಗಳ ನಂತರ ತೆರೆದ ಬಸವಣ್ಣನ ಐಕ್ಯ ಮಂಟಪ; ಭಕ್ತರಲ್ಲಿ ಸಂತಸ
ಬಾಗಲಕೋಟೆ, ಅಕ್ಟೋಬರ್ 5: ಬಾಗಲಕೋಟೆಯಲ್ಲಿನ ಬಸವಣ್ಣನ ಐಕ್ಯ ಮಂಟಪಕ್ಕೆ ಬರೋಬ್ಬರಿ 17 ತಿಂಗಳ ಬಳಿಕ ಭಕ್ತರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಅಕ್ಟೋಬರ್ 3ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಮಂಡಳಿಯ ಅಧಿಕಾರಿಗಳು ಭಕ್ತರ ಬೇಡಿಕೆಯನ್ನು ಈಡೇರಿಸಿದ್ದಾರೆ.
ಕೆಲವು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ 2019 ಮೇ 22ರಿಂದಲೇ ಬಸವಣ್ಣನ ಐಕ್ಯ ಸ್ಥಳದ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆರು ತಿಂಗಳಲ್ಲಿ ಮುಗಿಯಬೇಕಿದ್ದ ಕಾರ್ಯ ಪ್ರವಾಹ, ಕೊರೊನಾ ಭೀತಿ, ಆಯುಕ್ತರ ವರ್ಗಾವಣೆ ಮುಂತಾದ ಕಾರಣಗಳಿಂದ 17 ತಿಂಗಳ ಬಳಿಕ ಆರಂಭಗೊಂಡಿದೆ. ಇದೀಗ ಮಂಟಪಕ್ಕೆ ಅವಕಾಶ ನೀಡಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.
2020 ಜೂನ್ 6ರಂದು ಮಂಡಳಿಯ ತಾಂತ್ರಿಕ ಸಲಹಾ ಸಮಿತಿ ಬಸವಣ್ಣನ ಐಕ್ಯ ಮಂಟಪ ದರ್ಶನ ಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು. ಆದರೆ ಕೊರೊನಾ ಸೋಂಕಿನ ಕಾರಣದಿಂದಾಗಿ ನಿರ್ಬಂಧವು ಮತ್ತೆ ಮುಂದುವರೆದಿತ್ತು. ಮತ್ತೆ 4 ತಿಂಗಳು ಬೀಗ ಹಾಕಿ ಪ್ರವೇಶಕ್ಕೆ ಅವಕಾಶ ಕೊಟ್ಟಿರಲಿಲ್ಲ. ನಿತ್ಯ ಕ್ಷೇತ್ರದ ದರ್ಶನಕ್ಕೆ ಬಂದ ಭಕ್ತರು ಸಂಗಮನಾಥನ ದರ್ಶನ ಪಡೆದು ಐಕ್ಯ ಮಂಟಪ ದರ್ಶನ ಇಲ್ಲದೆ ನಿರಾಸೆಯಿಂದ ತೆರಳುತ್ತಿದ್ದರು.

ಇದೀಗ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ದರ್ಶನದ ಅವಧಿಯನ್ನು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. ಈ ನಡುವೆ ಐಕ್ಯ ಮಂಟಪದ ಕೆಲವು ಸ್ಥಳದಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, 87 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆದಿದ್ದು, ಇದರ ಗುಣಮಟ್ಟವನ್ನು ಪರಿಶೀಲಿಸಬೇಕು ಎಂಬ ಮಾತುಗಳೂ ಕೇಳಿಬಂದಿವೆ.












Click it and Unblock the Notifications