ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಬಾಗಲಕೋಟೆಯ 19 ಜನ
ಬೆಂಗಳೂರು, ಏಪ್ರೀಲ್ 1: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಯಲ್ಲಿ ಪಾಲ್ಗೊಂಡಿದ್ದ ಬಾಗಲಕೋಟೆ ಜಿಲ್ಲೆಯ 19 ಜನರನ್ನು ಜಿಲ್ಲಾಡಳಿತವು ಕ್ವಾರಂಟೈನ್ನಲ್ಲಿ ಇಟ್ಟು, ತೀವ್ರ ನಿಗಾ ವಹಿಸಹಿಸಲು ಕ್ರಮಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸಾಮೂಹಿಕ ಪ್ರಾರ್ಥನೆ ಯಲ್ಲಿ ಬಾಗಲಕೋಟೆ ಜಿಲ್ಲೆ ಮೂಲದ 19 ಜನ ಭಾಗವಹಿಸಿದ್ದರ ಬಗ್ಗೆ ಈವರೆಗೆ ವಿವಿಧ ಮೂಲಗಳಿಂದ ಪತ್ತೆ ಹಚ್ಚಲಾಗಿದೆ.
ಭಾರತದಲ್ಲಿ 16 ಕೊರೊನಾ ಹಾಟ್ಸ್ಪಾಟ್ ನಗರಗಳು ಯಾವವು?
ನಾಲ್ವರನ್ನು ಬಾಗಲಕೋಟೆ ನಗರದ ವಿವಿಧ ಆಸ್ಪತ್ರೆಗಳ ಕ್ವಾರಂಟೈನ್ ನಲ್ಲಿಡಲಾಗಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗೋವಿಂದ ಕಾರಜೋಳ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತೀವ್ರ ನಿಗಾ ವಹಿಸಲಾಗಿದೆ
ಬಾಗಲಕೋಟೆ ನಗರದ ನಾಲ್ವರ ಕುಟುಂಬ ಸದಸ್ಯರನ್ನು ಅವರವರ ಮನೆಯಲ್ಲೇ ಕ್ವಾರಂಟೈನ್ ನಲ್ಲಿಟ್ಟು ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಉಳಿದ 15 ಜನರನ್ನೂ ಸಹಾ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಕಾರಜೋಳ ಹೇಳಿದ್ದಾರೆ.
ಬಾಗಲಕೋಟೆ ಎಸ್ ಪಿ ಪರಿಶ್ರಮ
ದೆಹಲಿಯಲ್ಲಿ 11, ಬೆಂಗಳೂರಿನಲ್ಲಿ ಇಬ್ಬರು, ಬೆಳಗಾವಿಯಲ್ಲಿ ಒಬ್ಬರು ಮತ್ತು ಗುಂಟೂರು ಜಿಲ್ಲೆಯಲ್ಲಿ ಒಬ್ಬರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಅವರು ನಿರಂತರ ಮತ್ತು ತೀವ್ರ ಪರಿಶ್ರಮವಹಿಸಿ ವಿವಿಧ ಮೂಲಕಗಳ ಮೂಲಕ ಬಾಗಲಕೋಟೆ ಜಿಲ್ಲೆ ಮೂಲದವರು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದವರ ಹಾಗೂ ಅವರು ಪ್ರಸ್ತುತ ವಾಗಿರುವ ಸ್ಥಳಗಳ ಕುರಿತ ಮಾಹಿತಿಯನ್ನು ತ್ವರಿತವಾಗಿ ಸಂಗ್ರಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳ ಕಾರ್ಯ ಶ್ಲಾಘನೀಯ
ಜಿಲ್ಲೆ ಹಾಗೂ ನಗರಗಳ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಉಳಿದ 15 ಜನರನ್ನು ಆಯಾ ಸ್ಥಳಗಳ ಕ್ವಾರಂಟೈನ್ ನಲ್ಲಿಡಲು ಕ್ರಮಕೈಗೊಂಡಿದ್ದಾರೆ. ಅತ್ತ್ಯುತ್ತಮ ಸಮನ್ವಯತೆ ಸಾಧಿಸಿದ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಹಾಗೂ ವ್ಯವಸ್ಥಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಕಾರ್ಯ ಶ್ಲಾಘನೀಯ ವಾಗಿದೆ ಎಂದರು.
ಸ್ವಯಂ ಪ್ರೇರಿತರಾಗಿ ತಪಾಸಣೆಗೊಳಗಾಗಬೇಕು
ಮಸೀದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾಗಬೇಕು ಜಿಲ್ಲಾಡಳಿತವು ನಿರ್ದೇಶನ ನೀಡಿದ್ದು, ಜಿಲ್ಲಾಡಳಿತದ ವತಿಯಿಂದಲೇ ಕ್ವಾರಂಟೈನ್ ನಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತದೆ. ಈ ಸಾಮೂಹಿಕ ಪ್ರಾರ್ಥನೆ ಯಲ್ಲಿ ಪಾಲ್ಗೊಂಡವರು ಮುಕ್ತವಾಗಿ ಜಿಲ್ಲಾ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾಗಬೇಕು ಗೋವಿಂದ ಎಂ ಕಾರಜೋಳ ಮನವಿ ಮಾಡಿದ್ದಾರೆ.