ರೈಲು ನಿಲ್ದಾಣದ ಹೊರಗೆ ಮಲಗಿದ್ದ ಏಳು ಮಂದಿ ಮೇಲೆ ಹರಿದ ಎಸ್ ಯುವಿ
ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ ಯುವಿ) ಮಲಗಿದ್ದ ಏಳು ಮಂದಿ ಮೇಲೆ ವೇಗವಾಗಿ ಚಲಿಸಿದ ಘಟನೆ ಹರಿಯಾಣದ ಸೋಣಿಪತ್ ಜಿಲ್ಲೆಯ ರೈಲು ನಿಲ್ದಾಣದ ಒಳ ಭಾಗದಲ್ಲಿ ಸೋಮವಾರ ಸಂಭವಿಸಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನಕ್ಕೆ ಕೂಡ ಭಾರೀ ಹಾನಿಯಾಗಿದೆ.
ಟಿಕೆಟ್ ವಿತರಿಸುವ ಹಾಲ್ ನ ಹೊರ ಭಾಗದಲ್ಲಿ ಗಾಯಾಳುಗಳು ಮಲಗಿದ್ದರು. ಆಗ ಎಸ್ ಯುವಿ ಹ್ಯುಂಡೈ ಕ್ರೇಟಾ ಬ್ಯಾರಿಕೇಡ್ ನ ಗುದ್ದಿಕೊಂಡು ಬಂದು ಮಲಗಿದ್ದವರ ಹರಿಯಿತು. ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾರಿನೊಳಗೆ ಐವರು ಇದ್ದರು. ಆ ಪೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ.

ಮಾಧ್ಯಮವೊಂದರ ಜತೆಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಹರಿಯಾಣದ ಪಾಣಿಪತ್ ನ ಹತ್ತೊಂಬತ್ತು ವರ್ಷದ ಯುವಕ ವಾಹನ ಚಲಾಯಿಸುತ್ತಿದ್ದ ಎಂದು ಹೇಳಿದ್ದಾರೆ. ಕಾರಿನೊಳಗೆ ಇದ್ದವರು ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.












Click it and Unblock the Notifications