ಅಮರಾವತಿಯಿಂದ ಬೆಂಗಳೂರಿಗೆ ಹೈಸ್ಪೀಡ್ ರೈಲು ಏನು ಪ್ರಯೋಜನ?
ಬೆಂಗಳೂರು/ಹೈದರಾಬಾದ್, ಜೂನ್ 06: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಆಂಧ್ರಪ್ರದೇಶಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದರಲ್ಲಿ ವಿಶಾಖಪಟ್ಟಣಂ-ಚೆನ್ನೈ ಹಾಗು ಬೆಂಗಳೂರು-ಅಮರಾವತಿ ನಡುವೆ ಹೈಸ್ಪೀಡ್ ರೈಲು ಯೋಜನೆ ಮುಖ್ಯವಾಗಿದೆ. ಇದಕ್ಕಾಗಿ ವಿದೇಶಿ ಸಂಸ್ಥೆಗಳ ಹೂಡಿಕೆಗೆ ಕರೆ ಮಾಡಲಾಗಿದೆ. ಒಳ್ಳೆಯದು, ಆದರೆ, ಈ ಯೋಜನೆಯಿಂದ ಕರ್ನಾಟಕಕ್ಕೆ ಯಾವುದೇ ಲಾಭವಾಗುವುದಿಲ್ಲ.
ಹೈದರಾಬಾದ್ ಕರ್ನಾಟಕ ಪ್ರದೇಶದ ರಾಯಚೂರು ಕಡೆಗೆ ರೈಲು ಓಡಿಸಿದ್ದರೆ ಆ ಭಾಗದ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗುತ್ತಿತ್ತು. ಬದಲಿಗೆ ಅಮರಾವತಿಯಿಂದ ರಾಯಲ ಸೀಮೆ ಭಾಗ ಸುತ್ತಿಕೊಂಡು ಬೆಂಗಳೂರಿಗೆ ತ್ವರಿತ ಗತಿಯಿಂದ ರೈಲು ಬರುವುದರಿಂದ ರಾಜ್ಯದ ಕೆಲ ಭಾಗಗಳಿಗೆ ಭಾಗಶಃ ಮಾತ್ರ ನೆರವಾಗುತ್ತದೆ. [ಹೈಸ್ಪೀಡ್ ರೈಲು: ಚೀನಾ ಜೊತೆ ಸಿಎಂ ಸಿದ್ದು ಮಾತುಕತೆ]

ವಲಸಿಗರಿಗೆ ಮಾತ್ರ ಅನುಕೂಲ: ಒಂದು ರಾಜ್ಯದ ರಾಜಧಾನಿಯಿಂದ ಮತ್ತೊಂದು ರಾಜ್ಯದ ರಾಜಧಾನಿಗೆ ತ್ವರಿತಗತಿಯ ಸಂಪರ್ಕ ಸಾಧ್ಯವಾಗುವುದರಿಂದ ಆರ್ಥಿಕ ವ್ಯವಹಾರ, ಸಾಮಾಜಿಕ ಸ್ಥಿತಿಗತಿ ಸುಧಾರಣೆ ಸಾಧ್ಯ ಎಂದು ರೈಲ್ವೆ ಇಲಾಖೆ ಅಂದುಕೊಂಡಿದ್ದರೆ, ಅದಕ್ಕಿಂತ ದೊಡ್ಡ ಪ್ರಮಾದ ಬೇರೊಂದಿಲ್ಲ. ಬೆಂಗಳೂರಿನ ವಿಷಯದಲ್ಲಿ ಈ ಹೈಸ್ಪೀಡ್ ರೈಲು ಮಾರ್ಗದಿಂದ ವಲಸಿಗರಿಗೆ ಮಾತ್ರ ಅನುಕೂಲವಾಗಲಿದೆ.
ಮುಖ್ಯವಾಗಿ ಸಾಫ್ಟ್ ವೇರ್ ಉದ್ಯೋಗಿಗಳು ಬೆಂಗಳೂರಿನ ಐಟಿ ಸಂಸ್ಥೆಗಳಿಗೆ ಸಂದರ್ಶನ ನೀಡಿ ಮತ್ತೆ ವಾಪಸ್ ಹೋಗಲು ರಹದಾರಿ ಸಿಕ್ಕಿದ್ದಂತಾಗುತ್ತದೆ.
'ವಲಸೆ ಕಾನೂನು' ಮಾಡುವಂತಿಲ್ಲ, ಒಕ್ಕೂಟ ವ್ಯವಸ್ಥೆ, ನಾವೆಲ್ಲರೂ ಭಾರತೀಯರು ಎಂಬ ಘೋಷವಾಕ್ಯಗಳು ಉಪಯೋಗಕ್ಕೆ ಬರುವುದಿಲ್ಲ. ಪರಮ ಸಹಿಷ್ಣು ರಾಜ್ಯ ಎನಿಸಿಕೊಂಡಿರುವ ಕರ್ನಾಟಕ ಎಂದಿನಂತೆ ಧಾರಾಳತನ ತೋರುತ್ತಾ ಹೋದರೆ ಇನ್ಮುಂದೆ ಇದೇ ರೀತಿ ಹೈಸ್ಪೀಡ್, ಬುಲೆಟ್ ರೈಲುಗಳನ್ನು ಬಿಡುತ್ತಾರೆ.[ಹಳಿತಪ್ಪಿದ ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ]

ಆಂತರಿಕ ಸಾರಿಗೆ ವ್ಯವಸ್ಥೆ ಬಲಗೊಳಿಸಿ: ನಮಗೆ ಮುಖ್ಯವಾಗಿ ಬೇಕಿರುವುದು ಆಂತರಿಕ ಸಾರಿಗೆ ವ್ಯವಸ್ಥೆ, ಕರ್ನಾಟಕದ ಹುಬ್ಬಳ್ಳಿಯಿಂದ ಬೆಂಗಳೂರು, ಬೆಂಗಳೂರಿನಿಂದ ಮಂಗಳೂರು, ಹೀಗೆ ಪ್ರಮುಖ ನಗರಗಳಿಗೆ ತ್ವರಿತಗತಿ ರೈಲನ್ನು ಮೊದಲಿಗೆ ಓಡಿಸಿದರೆ ಮಾತ್ರ ಉದ್ಧಾರ ಸಾಧ್ಯ.
ಅಮರಾವತಿಯಲ್ಲಿ ಆಂಧ್ರ ಸಿಎಂ ನಾಯ್ಡು ಜತೆ ರೈಲ್ವೆ ಸಚಿವ ಪ್ರಭು
ಇಲ್ಲದಿದ್ದರೆ, ಬೆಂಗಳೂರು ಬೋರ್ಡಿಂಗ್, ಲಾಡ್ಜಿಂಗ್ ತಾಣವಾಗಿ ಬಳಕೆಯಾಗುವುದರಲ್ಲಿ ಸಂಶಯವೇ ಇಲ್ಲ. ದೆಹಲಿ -ಆಗ್ರಾ ನಡುವೆ ಚಲಿಸುತ್ತಿರುವ ಗತಿಮಾನ್ ಎಕ್ಸ್ ಪ್ರೆಸ್ ನಂತೆ ಬೆಂಗಳೂರಿನಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿಗೆ ಹೈಸ್ಪೀಡ್ ರೈಲಿನ ಅಗತ್ಯವಿದೆ.660 ಕಿ.ಮೀ ಗೂ ಅಧಿಕ ದೂರದ ಅಮರಾವತಿಗೆ ಬೆಂಗಳೂರಿನಿಂದ ತ್ವರಿತ ಸಂಪರ್ಕ ಯಾವ ಪ್ರಯೋಜನಕ್ಕೆ ಇನ್ನೂ ವಿವರಣೆ ಸಿಕ್ಕಿಲ್ಲ.[ಗತಿಮಾನ್ ಎಕ್ಸ್ ಪ್ರೆಸ್ ರೈಲಿನ ಚೆಂದ]
ಗತಿಮಾನ್ ಎಕ್ಸ್ ಪ್ರೆಸ್ ಉದ್ಘಾಟನೆ ವಿಡಿಯೋ












Click it and Unblock the Notifications