ಚಂದ್ರಬಾಬು ನಾಯ್ಡು ವಿರುದ್ಧ ಕ್ರೈಸ್ತ ಮುಖಂಡರ ಪ್ರತಿಭಟನೆ, ಟಿಡಿಪಿಗೆ ರಾಜೀನಾಮೆ
ಅಮರಾವತಿ, ಜನವರಿ 13: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ತೆಲುಗು ದೇಶಂ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗಿದೆ. ಕ್ರೈಸ್ತರ ಕುರಿತಾದ ಅವರ ಇತ್ತೀಚಿನ ಹೇಳಿಕೆಯನ್ನು ಖಂಡಿಸಿ ರಾಜ್ಯದ ಎಲ್ಲ 13 ಜಿಲ್ಲೆಗಳ ಕ್ರೈಸ್ತ ಮುಖಂಡರು ಟಿಡಿಪಿ ತ್ಯಜಿಸಿದ್ದಾರೆ. ಹಾಗೆಯೇ ನಾಯ್ಡು ಅವರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೋರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಪಕ್ಷದ ಪ್ರಣಾಳಿಕೆಯಲ್ಲಿ ಕ್ರೈಸ್ತರ ಕುರಿತು ನೀಡಿರುವ ಭರವಸೆಯ ವಿಚಾರದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ನಿಲುವನ್ನು ಅವರು ಪ್ರಶ್ನಿಸಿದ್ದಾರೆ. ಕ್ರೈಸ್ತರ ಕುರಿತಾದ ನಾಯ್ಡು ಅವರ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಪಕ್ಷದ ಮಾಜಿ ರಾಜ್ಯ ಸಂಚಾಲಕ ಹಾಗೂ ಚಿತ್ತೂರು ಜಿಲ್ಲಾಧ್ಯಕ್ಷ ಯಲಮಂಚಿಲಿ ಪ್ರವೀಣ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಿಂದೂ ದೇವಾಲಯಗಳ ಮೇಲಿನ ದಾಳಿ ಹಾಗೂ ಹಿಂದೂ ದೇವತೆಗಳ ವಿಗ್ರಹಗಳನ್ನು ಹಾಳುಗೆಡವಿದ ಪ್ರಕರಣಗಳನ್ನು ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಜಗನ್ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದಿದ್ದರು.

ಶ್ರೀರಾಮನೊಂದಿಗೆ ಕ್ರಿಶ್ಚಿಯನ್ನನ್ನು ಹೇಗೆ ಹೋಲಿಕೆಮಾಡಲು ಸಾಧ್ಯ? ಘೋಷಣೆಗೆ ಸಹಿ ಹಾಕದೆ ಒಬ್ಬ ಕ್ರೈಸ್ತ ತಿರುಮಲ ದೇವಾಲಯಕ್ಕೆ ಪ್ರವೇಶಿಸಲು ಹೇಗೆ ಸಾಧ್ಯ? ಎಂದು ನಾಯ್ಡು ಕೇಳಿದ್ದರು. ಇದುವರೆಗೂ ಜಾತ್ಯತೀತ ನಿಲುವುಗಳನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದ ಚಂದ್ರಬಾಬು ನಾಯ್ಡು ಈ ಬಾರಿ ಹಿಂದುತ್ವದ ಪರ ಮಾತನಾಡಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
ನಾಯ್ಡು ಅವರು ನೀಡಿದ ಹೇಳಿಕೆ ನಮಗೆ ನೋವುಂಟುಮಾಡಿದೆ. ಅವರು ಇಡೀ ಕ್ರೈಸ್ತ ಸಮುದಾಯವನ್ನು ಅವಮಾನಿಸಿದ್ದಾರೆ. ಅವರು ನಮ್ಮ ಧರ್ಮದ ಬಗ್ಗೆ ಈ ರೀತಿ ಕೀಳಾಗಿ ಮಾತನಾಡಬಾರದಿತ್ತು ಎಂದು ಟಿಡಿಪಿ ಕ್ರೈಸ್ತ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಹೇಳಿದ್ದಾರೆ.
ಟಿಡಿಪಿಯ ಮಾಜಿ ಶಾಸಕ ಫಿಲಿಪ್ ಸಿ ಟಾಚರ್ ಅವರು ನಾಯ್ಡು ಹೇಳಿಕೆ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಘಟಕದ ಅನೇಕರು ಅವರನ್ನು ಅನುಸರಿಸಿದ್ದಾರೆ.












Click it and Unblock the Notifications