ವಿಶ್ವ ಬ್ಯಾಂಕ್ ಆಯಿತು, ಈಗ ಚೀನಾ ಬ್ಯಾಂಕ್ ನಿಂದಲೂ ಅಮರಾವತಿಗೆ ನೆರವಿಲ್ಲ
ಅಮರಾವತಿ (ಆಂಧ್ರಪ್ರದೇಶ), ಜುಲೈ 23: ಬೀಜಿಂಗ್ ನ ಬೆಂಬಲ ಇರುವ ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನಿಂದ ಆಂಧ್ರಪ್ರದೇಶದ ಹೊಸ ರಾಜಧಾನಿಗೆ ಹಣಕಾಸು ನೆರವು ನೀಡುವ ಯೋಜನೆಯಿಂದ ಹಿಂದೆ ಸರಿದಿದೆ. ಕಳೆದ ಶುಕ್ರವಾರವಷ್ಟೇ ವಿಶ್ವ ಬ್ಯಾಂಕ್ ಕೂಡ ಹೊಸ ರಾಜಧಾನಿಗೆ ಬೆಂಬಲವನ್ನು ಹಿಂದೆ ಪಡೆದಿತ್ತು.
ಆಂಧ್ರಪ್ರದೇಶದ ಹೊಸ ರಾಜಧಾನಿಗೆ ಅಮರಾವತಿ ಎಂದು ಈಗಾಗಲೇ ನಾಮಕರಣ ಮಾಡಲಾಗಿದೆ. ಈ ನಗರವು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ- ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಕನಸಿನ ಕೂಸು. ಕಳೆದ ಮೇ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹೀನಾಯವಾಗಿ ಸೋತಿದ್ದು, ವೈಎಸ್ ಆರ್ ಕಾಂಗ್ರೆಸ್ ಅಧಿಕಾರ ಹಿಡಿದು, ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿ ಆಗಿದ್ದಾರೆ.
ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನಿಂದ ಇನ್ನು ಅಮರಾವತಿ ಸಸ್ಟೈನಬಲ್ ಇನ್ ಫ್ರಾಸ್ಟ್ರಕ್ಚರ್ ಅಂಡ್ ಇನ್ ಸ್ಟಿಟ್ಯೂಷನಲ್ ಡೆವೆಲಪ್ ಮೆಂಟ್ ಯೋಜನೆಯನ್ನು ಹಣಕಾಸು ಒದಗಿಸುವುದಕ್ಕೆ ಸಂಬಂಧಿಸಿದಂತೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕಳಿಸಿರುವ ಮೇಲ್ ನಲ್ಲಿ ಬ್ಯಾಂಕ್ ನ ವಕ್ತಾರೆ ತಿಳಿಸಿದ್ದಾರೆ.