ಅಸನಿ ಚಂಡಮಾರುತ: ವಿಶಾಖಪಟ್ಟಣಂಗೆ ವಿಮಾನಗಳು ರದ್ದು
ವಿಶಾಖಪಟ್ಟಣಂ, ಮೇ 11: ಅಸಾನಿ ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಗಾಳಿಯು ವೇಗವಾಗಿ ಬೀಸುತ್ತಿದೆ. ಇದರ ಪರಿಣಾಮ ಹವಾಮಾನ ಬದಲಾವಣೆಯಾಗಿದ್ದು, ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಚಂಡಮಾರುತದ ಪರಿಣಾಮ ವಿಶಾಖಪಟ್ಟಣಂಗೆ ಸಂಚಾರ ನಡೆಸಬೇಕಿದ್ದ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಏರ್ ಏಷ್ಯಾ ಸಂಸ್ಥೆ ಬೆಂಗಳೂರಿನಿಂದ ಹೊರಡಬೇಕಿದ್ದ 1, ದೆಹಲಿಯಿಂದ ಸಂಚರಿಸಬೇಕಿದ್ದ ಒಂದು ವಿಮಾನವನ್ನು ರದ್ದುಗೊಳಿಸಿದೆ. ಹವಾಮಾನ ಪರಿಸ್ಥಿತಿ ಅವಲೋಕಿಸಿ ಏರ್ ಇಂಡಿಯಾ ಶೀಘ್ರದಲ್ಲೇ ವಿಮಾನ ಕಾರ್ಯಾಚರಣೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಇಂಡಿಗೋ ವಿಮಾನಗಳು ರದ್ದು; ಚಂಡಮಾರುತದ ಪ್ರಭಾವದಿಂದಾಗಿ ಎಲ್ಲಾ ಇಂಡಿಗೋ ವಿಮಾನಗಳು (22 ಆಗಮನ ಮತ್ತು 22 ನಿರ್ಗಮನ) ರದ್ದುಗೊಂಡಿವೆ. ಏರ್ ಏಷ್ಯಾ ಸಂಜೆಯ ವಿಮಾನಗಳ ಬಗ್ಗೆ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಲಿದೆ. ಸ್ಪೈಸ್ ಜೆಟ್ ಕೋಲ್ಕತ್ತಾ-ವಿಶಾಖಪಟ್ಟಣಂ-ಕೋಲ್ಕತ್ತಾವನ್ನು ರದ್ದುಗೊಳಿಸಿದೆ. ಮಧ್ಯಾಹ್ನ 2 ಗಂಟೆಯ ನಂತರ ಹೈದರಾಬಾದ್ ವಿಮಾನ ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮಳೆಯ ಮುನ್ಸೂಚನೆ; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಅಸನಿ' ಚಂಡಮಾರುತದ ಆಂಧ್ರ ಪ್ರದೇಶದ ಕರಾವಳಿ ಮೂಲಕ ಹಾದು ಹೋಗುತ್ತಿರುವುದರಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಬುಧವಾರ ಸಹ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಳೆಯಾಗುವ ಮುನ್ಸೂಚನೆ ಇದೆ. ಬುಧವಾರದ ಬಳಿಕ ಚಂಡಮಾರುತವು ದುರ್ಬಲವಾಗುವ ನಿರೀಕ್ಷೆ ಇದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಂಗಳವಾರದಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
Recommended Video
ರಾಜ್ಯದ ಕೃಷ್ಣಾ, ಗುಂಟೂರು, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶದಲ್ಲಿ ಗಂಟೆಗೆ 75 ರಿಂದ 95 ಕಿ. ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯು ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಮೇ 12ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿಳಿಸಲಾಗಿದೆ.
ಚಂಡಮಾರುತವು ಕಾಕಿನಾಡದಿಂದ ಸುಮಾರು 210 ಕಿ. ಮೀ. ದಕ್ಷಿಣ-ಆಗ್ನೇಯ ಮತ್ತು ವಿಶಾಖಪಟ್ಟಣಂನಿಂದ 310 ಕಿ. ಮೀ. ದಕ್ಷಿಣ-ನೈಋತ್ಯದಲ್ಲಿ ಕೇಂದ್ರೀಕೃತವಾಗಿದೆ. ಇದು ಬಹುತೇಕ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ.












Click it and Unblock the Notifications