ಮೂರು ರಾಜಧಾನಿ ಮಸೂದೆ ಹಿಂಪಡೆದ ಆಂಧ್ರ ಸರ್ಕಾರ; ಅಮರಾವತಿಯೊಂದೇ ಫೈನಲ್!
ಅಮರಾವತಿ, ನವೆಂಬರ್ 22: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳ ನಿರ್ಮಾಣ ಕುರಿತ ವಿವಾದದ ನಡುವೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರ ರಾಜ್ಯಕ್ಕೆ ಒಂದೇ ರಾಜಧಾನಿ ಅದು ಅಮರಾವತಿ ಎಂದು ಘೋಷಿಸಿದರು.
ಈ ಘೋಷಣೆಯೊಂದಿಗೆ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆದು ಹೈಕೋರ್ಟ್ಗೆ ನಿರ್ಧಾರವನ್ನು ತಿಳಿಸಲು ಆಂಧ್ರಪ್ರದೇಶ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅಮರಾವತಿ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಒಂದು ಕಾರ್ಯಕಾರಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರವು ರಾಜ್ಯಕ್ಕೆ ಮೂರು ವಿಭಿನ್ನ ರಾಜಧಾನಿಗಳನ್ನು ಪ್ರಸ್ತಾಪಿಸಿತ್ತು.
ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯವು ಆಂಧ್ರಪ್ರದೇಶದ ಹೈಕೋರ್ಟ್ಗೆ ರಾಜ್ಯದ ರಾಜಧಾನಿಯನ್ನು ರಾಜ್ಯ ಸರ್ಕಾರ ನಿರ್ಧರಿಸುವ ವಿಷಯ ಎಂದು ತಿಳಿಸಿದ್ದು, ಅದರಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ಹೇಳಿತ್ತು.

2018ರಲ್ಲಿ ಸಲ್ಲಿಸಲಾದ ಅರ್ಜಿದಾರ ಪೊಟ್ಲುರಿ ಶ್ರೀನಿವಾಸ ರಾವ್ ಮತ್ತು ಯೂನಿಯನ್ ಆಫ್ ಇಂಡಿಯಾ ಮತ್ತು ಇತರರ ನಡುವಿನ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಟಿ. ಹೆಡಾವು ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ಪ್ರತಿವಾದವನ್ನು ಸಲ್ಲಿಸಿದರು.
ಎಪಿ ಮರುಸಂಘಟನೆ ಕಾಯಿದೆ- 2014 (AP Reorganisation Act- 2014) ಸೆಕ್ಷನ್ 6ರ ಅಡಿಯಲ್ಲಿ ಕೇಂದ್ರ ಸರ್ಕಾರವು ಮಾರ್ಚ್ 28, 2014ರಂದು ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿಗಾಗಿ ಪರ್ಯಾಯಗಳನ್ನು ಅಧ್ಯಯನ ಮಾಡಲು ಕೆ.ಸಿ. ಶಿವರಾಮಕೃಷ್ಣನ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಪ್ರತಿ-ಅಫಿಡವಿಟ್ ಉಲ್ಲೇಖಿಸಿದೆ.

ಸಮಿತಿಯು ಅದೇ ವರ್ಷದ 2014, ಆಗಸ್ಟ್ 30ರಂದು ತನ್ನ ವರದಿಯನ್ನು ಸಲ್ಲಿಸಿತು. ಅದನ್ನು ಎರಡು ದಿನಗಳ ನಂತರ ಸೆಪ್ಟೆಂಬರ್ 1ರಂದು ಆಂಧ್ರಪ್ರದೇಶ ಸರ್ಕಾರಕ್ಕೆ ಕಳುಹಿಸಲಾಯಿತು. ಅಫಿಡವಿಟ್ನಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ 23, 2015ರಂದು ರಾಜಧಾನಿಯನ್ನು ಅಮರಾವತಿ ಎಂದು ಸೂಚಿಸಿ ಆದೇಶವನ್ನು ಹೊರಡಿಸಿದೆ ಎಂದು ಉಲ್ಲೇಖಿಸಿದೆ. ಅದೇ ವೇಳೆ "ರಾಜ್ಯದ ರಾಜಧಾನಿಯನ್ನು ಆಯಾ ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ,'' ಎಂದು ಹೇಳಿದೆ.
ಜುಲೈ 31, 2020ರಂದು ರಾಜ್ಯ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯಿದೆ 2020ರ ಮೂಲಕ ಆಂಧ್ರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಮೂರು ಆಡಳಿತ ಸ್ಥಾನಗಳನ್ನು ಹೊಂದಿರಬೇಕು ಎಂದು ಎಂದು ಅಫಿಡವಿಟ್ ಉಲ್ಲೇಖಿಸಿದೆ.
ಅವುಗಳನ್ನು ರಾಜಧಾನಿಗಳೆಂದು ಕರೆಯಬೇಕು. ಅದರಂತೆ, ಅಮರಾವತಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶವನ್ನು 'ಶಾಸಕ ರಾಜಧಾನಿ' ಎಂದು ಕರೆಯಲಾಗುವುದು, ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶವನ್ನು 'ಕಾರ್ಯನಿರ್ವಾಹಕ ರಾಜಧಾನಿ' ಮತ್ತು ಕರ್ನೂಲ್ ನಗರಾಭಿವೃದ್ಧಿ ಪ್ರದೇಶವನ್ನು 'ನ್ಯಾಯಾಂಗ ರಾಜಧಾನಿ' ಎಂದು ಕರೆಯಲಾಗುವುದು.
ಈ ಮಧ್ಯೆ, ಆಂಧ್ರಪ್ರದೇಶದ ಬಿಜೆಪಿ ನಾಯಕ ವೈ.ಎಸ್. ಚೌಧರಿ ಕಳೆದ ವಾರ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಘೋಷಿಸುವ ಬೇಡಿಕೆಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಬೆಂಬಲಿಸಲು ಬಿಜೆಪಿ ಪರವಾಗಿ ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಯಾವುದೇ ಅಧಿಕಾರವಿಲ್ಲದೇ ರಾಜ್ಯದಲ್ಲಿ ಮೂರು ರಾಜಧಾನಿಗಳು ಎಂದು ವೈಎಸ್ಆರ್ಸಿಪಿ ಸರ್ಕಾರ ಘೋಷಿಸಿತು. ರಾಜಧಾನಿ ಅಭಿವೃದ್ಧಿಗೆ ಭೂಮಿ ನೀಡಿದ ಸ್ಥಳೀಯ ರೈತರನ್ನು ಬೆಂಬಲಿಸುವ ಸಲುವಾಗಿ ಅಮರಾವತಿಯೇ ರಾಜಧಾನಿಯಾಗಿ ಉಳಿಯುವಂತೆ ಮಾಡುತ್ತದೆ ಎಂದು ಬಿಜೆಪಿ ನಾಯಕ ಚೌಧರಿ ತಿಳಿಸಿದ್ದರು.












Click it and Unblock the Notifications