ಬಿಜೆಪಿ ರಾಜ್ಯಾಧ್ಯಕ್ಷರ ಸೊಸೆ ನಿಗೂಢ ಸಾವು; ಪೊಲೀಸರು ದೌಡು
ಅಮರಾವತಿ, ಮೇ 28 : ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರ ಸೊಸೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕನ್ನ ಲಕ್ಷ್ಮೀನಾರಾಯಣ ಸೊಸೆ 32 ವರ್ಷದ ಸುಹಾರಿಕಾ ಮೃತಪಟ್ಟವರು. ಹೈದರಾಬಾದ್ನ ಗಚ್ಚಿಬೌಲಿ ಆಸ್ಪತ್ರೆಯಲ್ಲಿ ಗುರುವಾರ ಅವರು ಮೃತಪಟ್ಟಿದ್ದಾರೆ.
ಗುರುವಾರ ಸುಹಾರಿಕಾ ಸ್ನೇಹಿತೆಯನ್ನು ಭೇಟಿ ಮಾಡಲು ಅವರ ಮನೆಗೆ ತೆರಳಿದ್ದರು. ಅಲ್ಲಿ ಅವರು ಕುಸಿದು ಬಿದ್ದಿದ್ದು ತಕ್ಷಣ ಅವರನ್ನು ಗಚ್ಚಿಬೌಲಿಯ ಎಐಜಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದರು.

ರಾಯದುರ್ಗಂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸುಹಾರಿಕಾ ತಾಯಿ ಇದು ಹೃದಯಾಘಾತ ಇರಬಹುದು ಎಂದು ಶಂಕಿಸಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.
10 ವರ್ಷಗಳ ಹಿಂದೆ ಸುಹಾರಿಕಾ ಕನ್ನ ಲಕ್ಷ್ಮೀನಾರಾಯಣ ಅವರ ಪುತ್ರ ಫಣೀಂದ್ರ ಅವರನ್ನು ವಿವಾಹವಾಗಿದ್ದರು. ಪತಿ ಮತ್ತು ಪತ್ನಿ ಸೇರಿ ಸುನೀಂದ್ರ ಎಂಟರ್ಪ್ರೈಸಸ್ ಎಂಬ ಉದ್ಯಮವನ್ನು ಹೈದರಾಬಾದ್ನಲ್ಲಿ ನಡೆಸುತ್ತಿದ್ದರು.
ಕನ್ನ ಲಕ್ಷ್ಮೀನಾರಾಯಣ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. 4 ಬಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. 2014ರಲ್ಲಿ ಸೋಲು ಕಂಡಿದ್ದರು.
ವೈ. ಎಸ್. ರಾಜಶೇಖರ ರೆಡ್ಡಿ, ಕಿರಣ್ ಕುಮಾರ್ ರೆಡ್ಡಿ ಮತ್ತು ರೋಸಯ್ಯ ಅಖಂಡ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದಾಗ ಸಚಿವರಾಗಿ ಕನ್ನ ಲಕ್ಷ್ಮೀನಾರಾಯಣ ಕಾರ್ಯ ನಿರ್ವಹಣೆ ಮಾಡಿದ್ದರು.
2014ರ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಸೇರಿದ್ದರು. ಕನ್ನ ಲಕ್ಷ್ಮೀನಾರಾಯಣ ಅವರಿಗೆ ಫಣೀಂದ್ರ ಮತ್ತು ಕನ್ನ ನಾಗಾರ್ಜುನ ಎಂಬ ಇಬ್ಬರು ಪುತ್ರರು ಇದ್ದಾರೆ. ಕನ್ನ ನಾಗಾರ್ಜುನ ಗುಂಟೂರಿನ ಮೇಯರ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.












Click it and Unblock the Notifications