'ನೆಹರೂ ಅವರನ್ನು ಸಣ್ಣವರನ್ನಾಗಿ ಬಿಂಬಿಸಲು ಸರ್ದಾರ್ ಪುತ್ಥಳಿ ನಿರ್ಮಿಸಿದ್ದಲ್ಲ'
ಅಹ್ಮದಾಬಾದ್ (ಗುಜರಾತ್), ಏಪ್ರಿಲ್ 18: ಗುಜರಾತ್ ನಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಪುತ್ಥಳಿ ಸ್ಥಾಪನೆ ಮಾಡಿದ್ದು ದಿವಂಗತ ಪ್ರಧಾನಿ ಜವಾಹರ್ ನೆಹರೂ ಅವರನ್ನು ಸಣ್ಣವರನ್ನಾಗಿ ಬಿಂಬಿಸಲು ಅಲ್ಲ ಎಂದು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ನ ಅಮ್ರೇಲಿಯಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸರ್ದಾರ್ ಪಟೇಲ್ ತಮ್ಮ ನಾಯಕರು ಎಂದು ಕಾಂಗ್ರೆಸ್ ಹೇಳಿದರೂ ಆ ಪಕ್ಷದ ಯಾವ ನಾಯಕರೂ ಪುತ್ಥಳಿ ನೋಡಲು ಈ ವರೆಗೂ ಬಂದಿಲ್ಲ ಎಂದು ಹೇಳಿದ್ದಾರೆ.
ವಿಶ್ವದ ಅತಿ ದೊಡ್ಡ ಪುತ್ಥಳಿ ಎಂದು ಗೂಗಲ್ ನಲ್ಲಿ ಹುಡುಕಾಡಿದಾಗ ಏಕತೆಯ ಪುತ್ಥಳಿ ಹಾಗೂ ಗುಜರಾತ್ ನ ಹೆಸರು ಕಾಣಿಸಿಕೊಂಡರೆ ನಿಮಗೆಹೆಮ್ಮೆ ಅನಿಸುವುದಿಲ್ಲವೆ? ನೆಹರೂ ಅವರನ್ನು ಕಡಿಮೆ ಮಾಡುವ ಸಲುವಾಗಿ ಸರ್ದಾರ್ ಪಟೇಲರ ಪುತ್ಥಳಿ ನಿರ್ಮಿಸಿಲ್ಲ. ಪಟೇಲ್ ರ ಪುತ್ಥಳಿ ಎಷ್ಟು ದೊಡ್ಡದು ಅಂದರೆ ನೀವು ಇತರರನ್ನು ಸಣ್ಣದಾಗಿ ಕಾಣಲಿ ಎಂದು ಪ್ರಯತ್ನಿಸಬಾರದು ಎಂದು ಮೋದಿ ಹೇಳಿದ್ದಾರೆ.

ನಮ್ಮ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದನೆಯನ್ನು ಜಮ್ಮು ಮತ್ತು ಕಾಶ್ಮೀರದ ಎರಡೂವರೆ ಜಿಲ್ಲೆಗೆ ಸೀಮಿತಗೊಳಿಸಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ಇತರೆಡೆ ಬಾಂಬ್ ಸ್ಫೋಟ ಕೂಡ ಆಗಿಲ್ಲ. ಪಾಕಿಸ್ತಾನ ಎಂಥ ಸ್ಥಿತಿ ತಲುಪಿದೆ ಅಂದರೆ, ನಾವು ಫೋನ್ ಕರೆ ಸ್ವೀಕರಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿಕೊಳ್ಳಬೇಕಾಯಿತು ಎಂದಿದ್ದಾರೆ.
ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಅವರು, ಸರ್ದಾರ್ ಸರೋವರ್ ಯೋಜನೆ ನಲವತ್ತು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವಾತಂತ್ರ್ಯಾ ನಂತರ ಅತ್ಯಂತ ಕಡಿಮೆ ಸ್ಥಾನಗಳಿಗೆ ಕಾಂಗ್ರೆಸ್ ಕುಸಿಯಿತು. ಆದರೂ ಆಡಳಿತಾರೂಢ ಪಕ್ಷ ಆಗುವ ಕನಸು ಕಾಣುತ್ತಿದೆ ಎಂದು ತಿವಿದರು.












Click it and Unblock the Notifications