ಬಿಜೆಪಿ ಸೇರಿದ ಹಿಂದುಳಿದ ವರ್ಗದ ಮುಖಂಡ ಅಲ್ಪೇಶ್ ಠಾಕೂರ್
ಅಹಮದಾಬಾದ್, ಜುಲೈ 18: ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದ ಗುಜರಾತ್ನ ಹಿಂದುಳಿದ ಸಮುದಾಯದ ಪ್ರಭಾವಿ ನಾಯಕ ಅಲ್ಪೇಶ್ ಠಾಕೂರ್ ಅವರು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜೀತು ವಘಾನಿ ಅವರ ಸಮ್ಮುಖದಲ್ಲಿ ಠಾಕೂರ್ ಅವರೊಂದಿಗೆ ಅವರ ನಿಕಟವರ್ತಿ ಧವಳ್ ಸಿನ್ಹ ಜಾಲಾ ಅವರೂ ಬಿಜೆಪಿ ಸೇರ್ಪಡೆಯಾದರು.
ಜುಲೈ 5ರಂದು ನಡೆದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಶಾಸಕ ಸ್ಥಾನವನ್ನು ತ್ಯಜಿಸಿದ್ದರು.

ಠಾಕೂರ್ ಅವರ ನೇತೃತ್ವದ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ (ಜಿಕೆಟಿಎಸ್) ಈ ಮುಂಚೆ ಅವರು ಬಿಜೆಪಿ ಸೇರುವುದನ್ನು ಖಚಿತಪಡಿಸಿತ್ತು.
'ಕಾಂಗ್ರೆಸ್ ಶಾಸಕರಾದ ಅಲ್ಪೇಶ್ ಠಾಕೂರ್ ಮತ್ತು ಧವಳ್ ಸಿನ್ಹ ಜಾಲಾ ಅವರು ಗುರುವಾರ ಸಂಜೆ ನಾಲ್ಕು ಗಂಟೆಗೆ ಬಿಜೆಪಿಯ ಶ್ರೀಕಮಲಂ ಮುಖ್ಯ ಕಚೇರಿಯಲ್ಲಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ' ಎಂದು ಜಿಕೆಟಿಎಸ್ ಉಪಾಧ್ಯಕ್ಷ ಜಗತ್ಸಿನ್ಜ ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದರು.
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಏಪ್ರಿಲ್ 10ರಂದು ಕಾಂಗ್ರೆಸ್ ಪಕ್ಷಕ್ಕೆ ಇಬ್ಬರೂ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ನಾಯಕರಿಂದ ಅವಮಾನವಾಗಿದೆ ಎಂದು ಆರೋಪಿಸಿದ್ದರು. ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ.
ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಎರಡು ರಾಜ್ಯಸಭಾ ಸೀಟುಗಳಲ್ಲಿ ಸ್ಪರ್ಧಿಸಿದ್ದ ಎಸ್. ಜೈಶಂಕರ್ ಮತ್ತು ಜೂಗಲ್ ಕಿಶೋರ್ ಠಾಕೂರ್ ಅವರ ಪರವಾಗಿ ಜುಲೈ 5ರಂದು ಮತ ಚಲಾಯಿಸಿದ್ದರು.
2017ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಲ್ಪೇಶ್ ಠಾಕೂರ್, ಉತ್ತರ ಗುಜರಾತ್ನ ರಾಧಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಜಾಲಾ ಅವರು ಅರವಾಳಿ ಜಿಲ್ಲೆಯ ಬಾಯಡ್ ಕ್ಷೇತ್ರದಿಂದ ಗೆದ್ದಿದ್ದರು.












Click it and Unblock the Notifications