20 ಕೆಜಿ ತೂಕ ಇಳಿದ ಮೇಲೆ ಹಾರ್ದಿಕ್ ಕಡೆ ನೋಡಿದ ಗುಜರಾತ್ ಸರ್ಕಾರ!
ಅಹ್ಮದಾಬಾದ್, ಸೆಪ್ಟೆಂಬರ್ 05: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟೀದಾರ್ ಆಂದೋಲನದ ಮುಖಂಡ ಹಾರ್ದಿಕ್ ಪಟೇಲ್ 20 ಕೆ.ಜಿ ತೂಕ ಕಳೆದುಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಉಪವಾಸ ಆರಂಭಿಸಿ ಹನ್ನೊಂದು ದಿನವಾದರೂ ಹಾರ್ದಿಕ್ ಪಟೇಲ್ ರತ್ತ ಕಣ್ಣೆತ್ತಿಯೂ ನೋಡದಿದ್ದ ಗುಜರಾತ್ ಸರ್ಕಾರ ಇದೀಗ ಅವರನ್ನು ಓಲೈಸಲು ಮುಂದಾಗಿದೆ.
20 ಕೆಜಿ ತೂಕ ಕಳೆದುಕೊಂಡ ಹಾರ್ದಿಕ್ ಪಟೇಲ್ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ, ಇದು ಹೀಗೆಯೇ ಮುಂದುವರಿದರೆ ಸಂಕಷ್ಟ ಎದುರಿಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದರಿಂದ ಎಚ್ಚೆತ್ತುಕೊಂಡ ಸರ್ಕಾರ ಅವರು ಉಪವಾಸ ವಾಪಸ್ ಪಡೆಯುವಂತೆ ಮನವಿ ಮಾಡಲು ಮುಂದಾಗಿದೆ.
ಮಂಗಳವಾರ ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಹಾರ್ದಿಕ್ ಉಪವಾಸಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಿದ್ದು, 'ಅವರು(ಹಾರ್ದಿಕ್ ಪಟೇಲ್) ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ. ಆ ಕುರಿತು ಯಾವೆಲ್ಲ ಕ್ರಮ ಕೈಗೊಳ್ಳಬೇಕೋ ಆ ನಿಟ್ಟಿನಲ್ಲಿ ಯೋಚಿಸುತ್ತೇವೆ' ಎಂದು ಸಭೆಯ ನಂತರ ಬಿಜೆಪಿ ಮುಖಂಡರು ಹೇಳಿದ್ದಾರೆ.

ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ, ರೈತರ ಸಾಲ ಮನ್ನಾ, ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿರುವ ಅಲ್ಪೇಶ್ ಕಠಾರಿಯಾ ಬಿಡುಗಡೆಗಾಗಿ ಒತ್ತಾಯಿಸಿ ಹಾರ್ದಿಕ್ ಪಟೇಲ್ ಆ.24 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಪಾಟೀದಾರ್ ಅದಾಲತ್ ಆಂದೋಲನ್ ಸಮಿತಿ(PAAS) ನ ಮುಖಂಡರೂ ಹೌದು. 11 ದಿನಗಳ ಸತತ ಉಪವಾಸದ ನಂತರ ಅವರು ಬರೋಬ್ಬರಿ 20 ಕೆ.ಜಿ. ತೂಕ ಕಳೆದುಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಹಾರ್ದಿಕ್ ಅವರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಅವರು ಉಪವಾಸ ನಡೆಸುತ್ತಿರುವ ಅವರ ನಿವಾಸದ ಎದುರು "ICU on Wheel" ಅಂಬುಲೆನ್ಸ್ ಸೌಲಭ್ಯವನ್ನು ಗುಜರಾತ್ ಸರ್ಕಾರ ನೀಡಿದೆ.












Click it and Unblock the Notifications