ವಕೀಲರ ಸಂಘದ ಅಧ್ಯಕ್ಷೆಗೆ ಗುಂಡು ಹಾರಿಸಿ ಹತ್ಯೆ, ಹಂತಕನಿಂದ ಆತ್ಮಹತ್ಯೆ ಯತ್ನ
ಆಗ್ರಾ (ಉತ್ತರಪ್ರದೇಶ), ಜೂನ್ 12: ಉತ್ತರಪ್ರದೇಶದ ವಕೀಲರ ಸಂಘದ ಅಧ್ಯಕ್ಷೆ ದರ್ವೇಶ್ ಸಿಂಗ್ ಅವರನ್ನು ಬುಧವಾರ ನ್ಯಾಯಾಲಯದ ಅವರನ್ನು ವಕೀಲರೊಬ್ಬರು ಗುಂಡಿಟ್ಟು ಕೊಂದಿದ್ದು, ಆ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಕೀಲೆ ದರ್ವೇಶ್ ಸಿಂಗ್ ಎರಡು ದಿನಗಳ ಹಿಂದಷ್ಟೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಅವರು ಸಿವಿಲ್ ಕೋರ್ಟ್ ಗೆ ಭೇಟಿ ನೀಡಲು ಬಂದಿದ್ದ ಮಧ್ಯಾಹ್ನದ ಸಮಯದಲ್ಲಿ ಈ ಘಟನೆ ನಡೆದಿದೆ. ಆಗ್ರಾ ನಗರದ ಹೆಚ್ಚುವರಿ ಎಸ್.ಪಿ. ಪ್ರವೀಣ್ ವರ್ಮಾ ಮಾತನಾಡಿ, ವಕೀಲ ಮನೀಶ್ ಶರ್ಮಾ ಎಂಬುವವರು ಆಕೆಯನ್ನು ಕೊಂದಿರುವುದಾಗಿ ಹೇಳಿದ್ದಾರೆ.
ಆಕೆಯ ಮೇಲೆ ಮೂರು ಗುಂಡು ಹಾರಿಸಿದ ನಂತರ ಶರ್ಮಾ ಕೂಡ ತಮಗೆ ಗುಂಡು ಹಾರಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.

ವಕೀಲ ಮನೀಶ್ ಶರ್ಮಾ ಬಳಸಿದ ಪಿಸ್ಟಲ್ ಗೆ ಪರವಾನಗಿ ಇದೆ. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಮ್ಮ ಚುನಾವಣೆ ಗೆಲುವಿನ ನಂತರ ದರ್ವೇಶ್ ಸಿಂಗ್ ಮೊದಲ ಬಾರಿಗೆ ಕೋರ್ಟ್ ಗೆ ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸನ್ಮಾನ ಸಮಾರಂಭದಲ್ಲಿ ದಿಢೀರನೆ ಎದ್ದು ನಿಂತ ಶರ್ಮಾ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ಆ ನಂತರ ತಾನೂ ಗುಂಡು ಹಾರಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.












Click it and Unblock the Notifications