ಮತ್ತೆ ಅಗ್ಗದ ಮದ್ಯದ ಬಗ್ಗೆ ಮಾತನಾಡಿದ ಸರ್ಕಾರ!
ಬೆಂಗಳೂರು, ಸೆ.10 : ಕರ್ನಾಟಕದಲ್ಲಿನ ವೈನ್ ಮಾರಾಟ ನೀತಿಯನ್ನು ಸರಳಗೊಳಿಸುವ ಮೂಲಕ ವೈನ್ ಮಾರಾಟಕ್ಕೆ ಪ್ರೋತ್ಸಾಹ ನೀಡಬೇಕೆಂದು ರಾಜ್ಯ ವೈನ್ ಉತ್ಪಾದಕರ ಸಂಘ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಕರ್ನಾಟಕದ ವೈನ್ ಉತ್ಪಾದಕರ ಸಂಘದ ಅಧ್ಯಕ್ಷ ಪಿ.ಎಲ್.ವೆಂಕಟರಾಮರೆಡ್ಡಿ ನೇತೃತ್ವದ ನಿಯೋಗ, ಮಂಗಳವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ದೇಶಾದ್ಯಂತ ವೈನ್ ಮಾರಾಟಕ್ಕೆ ಏಕ ರೂಪದ ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿಬೇಕು ಎಂದರು.

ವೈನ್ ಲೇಬಲ್ ಗಳ ಮರು ಷರಿಷ್ಕರಣೆ ನಿಯಮವನ್ನು ಸಡಿಲಗೊಳಿಸಬೇಕು. ಪರಿಷ್ಕರಣೆ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಸಂಘ ಮನವಿ ಮಾಡಿತು. ರಾಜ್ಯ ವೈನ್ ಮಂಡಳಿಯನ್ನು ಪುನಃ ರಚನೆ ಮಾಡುವ ಮೂಲಕ ದ್ರಾಕ್ಷಿ ಬೆಳೆಗಾರರಿಗೆ ಮಂಡಳಿಯಲ್ಲಿ ಸ್ಥಾನ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದರು.
ಸಂಘದ ಬೇಡಿಕೆಗಳನ್ನು ಪರಿಶೀಲಿಸಿದ ಸಚಿವರು, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ರಾಜ್ಯ ಅಬಕಾರಿ ಡಿಪೋಗಳಲ್ಲಿ ವೈನ್ ಸಂಗ್ರಹಕ್ಕೆ ಅಗತ್ಯವಿರುವ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಅಗ್ಗದ ಮದ್ಯ ಸರಬರಾಜು : ಕರ್ನಾಟಕದಲ್ಲಿ ಅಗ್ಗದ ಮದ್ಯ ಸರಬರಾಜು ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಸತೀಶ್ ಜಾರಕಿ ಹೊಳಿ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮದ್ಯ ದರ ಏರಿಕೆ ಮಾಡುವುದಿಲ್ಲ.
ಅದರ ಬದಲು ಅಗ್ಗದ ದರದಲ್ಲಿ ಮದ್ಯ ನೀಡಲು ಬದಲಿ ವ್ಯವಸ್ಥೆ ಜಾರಿಗೆ ತರುವ ಆಲೋಚನೆ ಇದೆ ಎಂದು ಸಚಿವರು ಹೇಳಿದರು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಆದ್ದರಿಂದ ಮದ್ಯದ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.












Click it and Unblock the Notifications