ಸೂಟು, ಬೂಟು ತೊಟ್ಟು ಚೀನಾಕ್ಕೆ ಹಾರಿದ ಸಿಎಂ!
ಬೆಂಗಳೂರು, ಸೆ.10 : ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ರಾತ್ರಿ ಬಿಐಎಎಲ್ ವಿಮಾನ ನಿಲ್ದಾಣದಿಂದ ಹೊರಟು ಸಿಂಗಪುರ ಮೂಲಕ ಚೀನಾ ತಲುಪಲಿದ್ದಾರೆ.
ಸೆ.11ರಂದು ಚೀನಾದ ಡಾಲಿಯಾನ್ನಲ್ಲಿ ವಿಶ್ವಆರ್ಥಿಕ ವೇದಿಕೆ ಆಯೋಜಿಸಿರುವ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ನಂತರ ಅಂತಾರಾಷ್ಟ್ರೀಯ ಲೋಹ ತಯಾರಿಕೆ ಎಂಜಿನಿಯರಿಂಗ್ ಸಂಸ್ಥೆ, ಸಿನೋವೆಲ್ ಪವನ ಇಂಧನ ವ್ಯವಸ್ಥೆ, ಡಾಲಿಯಾನ್ನ ಬಂದರು ಮತ್ತು ಕೃಷಿ ಮಾರುಕಟ್ಟೆಗೆ ಭೇಟಿ ನೀಡಲಿದ್ದಾರೆ.

ಸೆ.12ರಂದು ಸಿದ್ದರಾಮಯ್ಯ ವಿವಿಧ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ. ಮಲೇಷ್ಯಾದ ಕ್ಯೂ-1ಗ್ರೂಪ್ನ ಡಾಟೊ ವಿಜಯ್ ಈಶ್ವರನ್, ಸ್ಪೇನ್ನ ಇಂಧನ ಉತ್ಪಾದನೆ ಕಂಪನಿ ಆರ್ ಯಸಿಯೋನಾದ ಸಿಐಓ ಕಾರ್ ಮೆನ್ ಬೆಸಿರಿಲ್, ಇಸ್ರೇಲ್ನ ಆವಿಷ್ಕಾರ, ಕೈಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಆಡಳಿತ ವಿಭಾಗದ ಮಹಾ ಪ್ರಧಾನ ಕಾರ್ಯದರ್ಶಿ ಅವಿ ಹಾಸ್ಸನ್ ಮುಂತಾದವರನ್ನು ಭೇಟಿ ಮಾಡಲಿದ್ದಾರೆ.
ದಕ್ಷಿಣ ಆಫ್ರಿಕಾದ ಕೈಗಾರಿಕೆ ಅಭಿವೃದ್ಧಿ ನಿಗಮದ ಮಂಡಳಿ ಅಧ್ಯಕ್ಷ ಎಂ.ಡಬ್ಲ್ಯು. ಹಾಲ್ಲಾ ಹಾಗೂ ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಿರುವ ಸಿಎಂ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಅವರಿಗೆ ಆಹ್ವಾನ ನೀಡಲಿದ್ದಾರೆ.
ಸೆ.13ರಂದು ಸಿದ್ದರಾಮಯ್ಯ ವಾಂಡಾ ಗ್ರೂಪ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಆಹಾರ ಭದ್ರತೆ ಪರಿಣಾಮ ಕುರಿತು ಚರ್ಚಾ ಸಭೆಯಲ್ಲಿ ರಾಜ್ಯದ 'ಅನ್ನ ಭಾಗ್ಯ' ಹಾಗೂ 'ಕ್ಷೀರ ಭಾಗ್ಯ'ದ ಕುರಿತು ಮಾಹಿತಿ ನೀಡಲಿದ್ದಾರೆ.
ಸೆ.14ರಂದು ಶಾಂಘೈ ವಿದ್ಯುತ್ ನಿಗಮ ಹಾಗೂ ಹುವಾಯೈಗೆ ಭೇಟಿ ನೀಡಿ ಅಂದು ಸಂಜೆ ದೆಹಲಿಗೆ ವಾಪಸ್ ಆಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಸಹಿತ ಎಂಟು ಅಧಿಕಾರಿಗಳು ಹಾಗೂ 14 ಮಂದಿ ವಾಣಿಜ್ಯ ಪ್ರತಿನಿಧಿಗಳು ಚೀನಾಕ್ಕೆ ತೆರಳಿದ್ದಾರೆ.












Click it and Unblock the Notifications