ಯಡಿಯೂರಪ್ಪ ಬಿಜೆಪಿಗೆ ಇನ್ನೂ ಹತ್ತಿರ ?

ಈ ತ್ರಿಮೂರ್ತಿಗಳ ಪೈಕಿ ಒಬ್ಬರಾದ ವಿಧಾನಪರಿಷತ್ತಿನ ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ಇಡೀ ಪ್ರಹಸನಕ್ಕೆ ಸಾಕ್ಷೀಭೂತರಾಗಿ, ಸೂತ್ರಧಾರಿಯಾಗಿದ್ದರೆ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು 'ಯಡಿಯೂರಪ್ಪ ಮತ್ತು ತಮ್ಮದು ಜನುಮ ಜನುಮದ ಸಂಬಂಧ' ಎಂದು ಯುಗಳ ಗೀತೆ ಹಾಡಿರುವುದು ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಕುತೂಹಲ ಕೆರಳಿಸಿದೆ.
ಒಂದು ಕಾಲದ ಕೊರಳ ಗೆಳೆಯರಾದ ಶಂಕರಮೂರ್ತಿ, ಯಡಿಯೂರಪ್ಪ ಮತ್ತು ಈಶ್ವರಪ್ಪ ಮತ್ತೊಮ್ಮೆ ಜತೆಯಾಗಿದ್ದಾರೆ. ಮತ್ತು ಮುಂದಿನ ನಾಡಹಬ್ಬದ ವೇಳೆಗೆ ಅಧಿಕೃತವಾಗಿಯೇ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳುವ ಬಗ್ಗೆ ಈಶ್ವರಪ್ಪ ಸೂಕ್ಷ್ಮವಾಗಿ ಹೇಳಿದ್ದಾರೆ. ಭಾನುವಾರ ಗೌರಿ ಹಬ್ಬದಂದು ಈ ಬೆಳವಣಿಗೆ ನಡೆದಿದೆ.
ಇದೇ ವೇಳೆ, ಶಿವಮೊಗ್ಗದಲ್ಲಿ ತ್ರಿಮೂರ್ತಿಗಳ ಗತವೈಭವ ಮರುಕಳುಸಿವಂತಾಗಲೂ ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವ ಬಗ್ಗೆಯೂ ಸುಳಿವು ದೊರೆತಿದೆ.
ಭಾನುವಾರ ಸಂಜೆ 4ಕ್ಕೆ ಶಂಕರಮೂರ್ತಿ ನಿವಾಸದಲ್ಲಿ ಸುಮಾರು 45 ನಿಮಿಷಗಳ ಕಾಲ ಮಹತ್ವದ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹಾಜರಿದ್ದರು.
ನಂತರ ಶಂಕರಮೂರ್ತಿ ಜತೆಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ದಸರಾ ಆಚರಿಸಲು ಉದ್ದೇಶಿಸಿರುವ ನೆಹರೂ ಕ್ರೀಡಾಂಗಣಕ್ಕೆ ತೆರಳಿ ಸಿಂಥೆಟಿಕ್ ಟ್ರಾಕ್ ಪರಿಶೀಲನೆ ನಡೆಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಪರಿಶೀಲನಾ ಕಾರ್ಯ ನಡೆಸಿದ್ದಾರೆ.
ಗಮನಾರ್ಹವೆಂದರೆ ಒಬ್ಬ ಆಯನೂರು ಮಂಜುನಾಥ್ ಮಾತ್ರ 'ತಮ್ಮ ನಾಯಕರು ಯಾವುದೇ ರಾಜಕೀಯದ ಬಗ್ಗೆ ಚರ್ಚೆ ನಡೆಸಲಿಲ್ಲ' ಎಂಬ ಸ್ಪಷ್ಟನೆ ನೀಡಿದ್ದಾರೆ. 'ಹಬ್ಬದ ಸಂದರ್ಭದಲ್ಲಿ ಅವರು ಪರಸ್ಪರ ಭೇಟಿಯಾಗುವುದು ಸಹಜ. ಹಿಂದಿನಿಂದಲೂ ಈ ಪದ್ಧತಿ ನಡೆದು ಬಂದಿದೆ. ಹಾಗಾಗಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸೇರಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದೂ ಹೇಳಿದ್ದಾರೆ.
ಆದರೆ ಶಂಕರಮೂರ್ತಿ ವಿಧಾನಪರಿಷತ್ ಅಧ್ಯಕ್ಷರಾಗುವ ಬದಲು ಸಕ್ರಿಯ ರಾಜಕಾರಣದಲ್ಲಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ. ತಾವು ಬಿಜೆಪಿಯಲ್ಲಿದ್ದು, ಯಡಿಯೂರಪ್ಪ ಕೆಜೆಪಿ ಎಂಬ ಹೊಸ ಪಕ್ಷ ಕಟ್ಟಿಕೊಂಡಿದ್ದಾರೆ. ಆದರೆ ಶಂಕರಮೂರ್ತಿ ನೇತೃತ್ವದಲ್ಲಿ ನಾವೆಲ್ಲರೂ ಮತ್ತೆ ಒಂದಾಗ್ತೇವೆ ಎಂಬ ಆಶಾಭಾವ ಹೊರಹಾಕಿದರು.












Click it and Unblock the Notifications