ಗಣಿಗಾರಿಕೆ: ಲೋಕಾಯುಕ್ತ ಫೈಲ್ ರೀ ಓಪನ್
ಬೆಂಗಳೂರು, ಸೆ.7: ಅಕ್ರಮ ಗಣಿಗಾರಿಕೆ ಕುರಿತು ನಿಕಟ ಪೂರ್ವ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಕೊಟ್ಟಿರುವ ವರದಿಗೆ ಮರುಜೀವ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.
ಲೋಕಾಯುಕ್ತ ವರದಿಯನ್ನು ಮರು ಪರಿಶೀಲಿಸುವಂತೆ ಹಿಂದಿನ ಬಿಜೆಪಿ ಸರ್ಕಾರ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿತ್ತು. ಆ ಆರ್ಜಿಯನ್ನು ವಾಪಸ್ ಪಡೆದುಕೊಂಡು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ವರದಿ ಅನ್ವಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಮೂಲಕ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆಸಿದ ಕಾಂಗ್ರೆಸ್ ಪಾದಯಾತ್ರೆ ವೇಳೆ ನೀಡಿದ್ದ ಭರವಸೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.
ನ್ಯಾ. ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಕುರಿತಂತೆ 2 ವರದಿ ನೀಡಿದ್ದರು. ವರದಿ ಮರು ವಿಮರ್ಶೆ ಮಾಡುವಂತೆ ಮತ್ತು ಸ್ಪಷ್ಟೀಕರಣ ಬಯಸಿ ಹಿಂದಿನ ಸರ್ಕಾರದ ಸಚಿವ ಸಂಪುಟ ನಿರ್ಧರಿಸಿತ್ತು. ಜೊತೆಗೆ ವರದಿಯನ್ನು ಲೋಕಾಯುಕ್ತರಿಗೆ ಹಿಂದಿರುಗಿಸಿತ್ತು. ಸ್ಪಷ್ಟೀಕರಣ ಕೇಳಿದ್ದನ್ನು ವಾಪಸ್ ಪಡೆಯಲು ರಾಜ್ಯ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿದ್ದು, ವಾರದಲ್ಲಿ ಈ ಪ್ರಕ್ರಿಯೆ ಮುಗಿಯುವ ಲಕ್ಷಣವಿದೆ.
ರಾಜ್ಯದ ಬೊಕ್ಕಸಕ್ಕೆ ಸುಮಾರು 16500 ಕೋಟಿ ರು ಗೂ ಅಧಿಕ ನಷ್ಟವಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಜಿ ಜನಾರ್ದನ ರೆಡ್ಡಿ ಸೇರಿದಂತೆ ಸುಮಾರು 600 ಅಧಿಕಾರಿಗಳನ್ನು ವರದಿಯಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿತ್ತು.

ಅಕ್ರಮ ಗಣಿಗಾರಿಕೆ ಕುರಿತಂತೆ ನ್ಯಾ. ಸಂತೋಷ್ ಹೆಗ್ಡೆ ವರದಿ ಜಾರಿ ಹಾಗೂ ಗಣಿ ಅಕ್ರಮಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ದೀರ್ಘ ಚರ್ಚೆಯಾಗಿದೆ. ಎರಡೂ ವರದಿಗಳ ಜಾರಿಗೆ ಸಹಮತ ವ್ಯಕ್ತವಾಗಿದ್ದು, ಈ ಬಗ್ಗೆ ಉಂಟಾಗುವ ಕಾನೂನು ತೊಡಕುಗಳು ಸೇರಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ, ಮುಖ್ಯ ಕಾರ್ಯದರ್ಶಿ ಹಾಗೂ ಅಡ್ವೊಕೇಟ್ ಜನರಲ್ ಗೆ ವಹಿಸಲಾಗಿದೆ.
ಸ್ಪಷ್ಟೀಕರಣ ಕೇಳುವ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಈ ಮೂವರು ಚರ್ಚೆ ನಡೆಸಿ ನಿರ್ಧಾರ ಮಾಡಲಿದ್ದಾರೆ. ಈ ನಿರ್ಧಾರದಂತೆ ಸ್ಪಷ್ಟೀಕರಣದ ವಿಷಯ ಲೋಕಾಯುಕ್ತರಿಂದ ವಾಪಸ್ ಆದರೆ, ಅಕ್ರಮ ಗಣಿಗಾರಿಕೆ ಕುರಿತಂತೆ ನ್ಯಾ. ಹೆಗ್ಡೆ ನೀಡಿರುವ 2 ವರದಿಗಳು ಯಥಾವತ್ತಾಗಿ ಜಾರಿಯಾಗಲಿವೆ.












Click it and Unblock the Notifications