ಪರಪ್ಪನ ಅಗ್ರಹಾರ ಜೈಲಿಗೆ ಕೊನೆಗೂ ಕಾಯಕಲ್ಪ

ಸೈಕೋ ಜೈಶಂಕರ್ ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಎಚ್ಚೆತ್ತಿರುವಂತೆ ಕಾಣುವ ರಾಜ್ಯ ಸರ್ಕಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವನ್ನು ಮತ್ತಷ್ಟು ವಿಸ್ತರಣೆ ಮಾಡಿ ಸುಧಾರಣೆ ತರಲು ತೀರ್ಮಾನಿಸಿದೆ.
'ಇದಕ್ಕಾಗಿ ಈಗಾಗಲೇ 20 ಎಕರೆ ಜಮೀನು ಗುರುತಿಸಲಾಗಿದ್ದು, ಸದ್ಯದಲ್ಲೇ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹೊಸ ಕಟ್ಟಡ ನಿರ್ಮಾಣದ ನೀಲ ನಕ್ಷೆ ಸಿದ್ಧವಾಗಲಿದೆ. ದುಡ್ಡಿಗೇನೂ ತೊಂದರೆಯಿಲ್ಲ. ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದೆ' ಎಂದು ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಸೈಕೋ ಜೈಶಂಕರ್ ಪರಾರಿಯಾಗಲು ಭದ್ರತಾ ವೈಫಲ್ಯವೇ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಮೊನ್ನೆ ಜೈಶಂಕರ್ ತಪ್ಪಿಸಿಕೊಂಡಾಗ ಜೈಲಿಗೆ ಭೇಟಿ ನೀಡಿದ್ದೆ. ಅಲ್ಲಿನ ಅವಸ್ಥೆ, ಕೈದಿಗಳ ದುರವಸ್ಥೆ ಕಂಡು ದಂಗಾದೆ.
22 CCTVಗಳ ಪೈಕಿ ಕೇವಲ ಐದಾರು ಚಾಲ್ತಿಯಲ್ಲಿವೆ. ಇನ್ನು ಇಡೀ ಜೈಲಿಗೆ watch tower ಅನ್ನುವುದೇ ಇಲ್ಲ! ಆದರೆ ಜೈಲು ಅಂದಮೇಲೆ ಅದು ಕಡ್ಡಾಯವಾಗಿರಬೇಕು. ರಾಜ್ಯ ಇತರೆ ಜೈಲುಗಳಲ್ಲೂ ಇದೇ ದುರವಸ್ಥೆಯಿದೆ. ಅಲ್ಲೂ ರಿಪೇರಿ ಮಾಡಲಾಗುವುದು ಎಂದು ಸಚಿವ ಜಾರ್ಜ್ ಹೇಳಿದ್ದಾರೆ.
ಜೈಲಿನ ಪ್ರವೇಶ ಸಂದರ್ಭದಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ, ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವುದರ ಜತೆಗೆ ಪೂರ್ಣ ಪ್ರಮಾಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.
ಈ ಕುರಿತಂತೆ ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿದ್ದು, ಅವರು ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲೂ ಭದ್ರತಾ ವ್ಯವಸ್ಥೆ ಸರಿಪಡಿಸುವ ಬಗ್ಗೆ ವರದಿ ನೀಡಲಿದ್ದಾರೆ. ಈ ವರದಿ ಕೈಗೆ ಸಿಕ್ಕಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.












Click it and Unblock the Notifications