ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ಬೆಂಗಳೂರು, ಆ.27 : ಸಿಎಂ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗೆ ಉಂಟಾಗಿದ್ದ ವಿಘ್ನ ನಿವಾರಣೆಯಾಗಿದೆ. ನ್ಯಾಯಬೆಲೆ ಅಂಗಡಿ ವಿತರಕರ ಬಹುದಿನದ ಬೇಡಿಕೆಗಳನ್ನು ಪೂರೈಸಲು ಸರ್ಕಾರ 157 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಬಂಪರ್ ಕೊಡುಗೆ ನೀಡಿದೆ.
ನಗರ ಮತ್ತು ಪಟ್ಟಣ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕ್ವಿಂಟಾಲ್ ಗೆ 1 ರೂ. ಸಾಗಾಣಿಕೆ ವೆಚ್ಚ ಹಾಗೂ 6ರೂ.ವನ್ನು ಹಮಾಲಿ ವೆಚ್ಚವಾಗಿ ನೀಡಲು ಸರ್ಕಾರ ಅನುಮತಿ ನೀಡಿದ್ದು, ಸೆ.1ರಿಂದಲೇ ಇದು ಜಾರಿಗೆ ಬಂದಿದೆ.
ಸಾಗಾಣಿಕೆ, ಕಮೀಷನ್, ಹಮಾಲಿ ವೆಚ್ಚಗಳನ್ನು ನೀಡದಿದ್ದರೆ ಅನ್ನಭಾಗ್ಯ ಯೋಜನೆ ಸ್ಥಗಿತಗೊಳಿಸುವುದಾಗಿ ನ್ಯಾಯಬೆಲೆ ಅಂಗಡಿ ವಿತರಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆದ್ದರಿಂದ ಸರ್ಕಾರ ಮೊಲದ ಹಂತದಲ್ಲಿ 157 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ.
ಸರ್ಕಾರ ವರ್ತಕರ ಬೇಡಿಕೆಗೆ ಸ್ಪಂದಿಸಿದ ಹಿನ್ನಲೆಯಲ್ಲಿ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳ ಬೇಡಿಕೆ ಪೂರೈಸುಂವತೆ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ, ದರೋಡೆ
ಹೊಸಪೇಟೆ ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಮಾಲೀಕನ ಮನೆಗೆ ನುಗ್ಗಿದ 6 ಮಂದಿ ದರೋಡೆಕೋರರು. ಮನೆಯಲ್ಲಿದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 50 ಸಾವಿರ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಬಳ್ಳಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮನೆಯವರು ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಆಗಮಿಸಿದರು, ಇದರಿಂದ ಬೆದರಿದ ದರೋಡೆಕೋರರು ಪರಾರಿಯಾಗಿದ್ದಾರೆ. ಗಾಯಗೊಂಡವರನ್ನು ಬಳ್ಳಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಮಾವಾಸ್ಯೆಯಂದು 6 ಜೋಡಿಗಳಿಗೆ ಕಂಕಣಭಾಗ್ಯ
ಚಿತ್ರದುರ್ಗದ ಮರುಘಾ ಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 6 ಜೋಡಿಗಳು ವಿವಾಹವಾದರು. ಅಮಾವಾಸ್ಯೆ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲು ವಿವಾಹ ಮಹೋತ್ಸವ ಸಂಘಟಿಸಲಾಗಿತ್ತು ಎಂದು ಶ್ರೀ ಶಿವಮೂರ್ತಿ ಸ್ವಾಮೀಜಿ ಹೇಳಿದರು.

ಅಪರಿಚಿತ ಮಹಿಳೆಯ ರೇಪ್, ಕೊಲೆ
ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹರಪನಹಳ್ಳಿಯ ಹಿರೆಕೇರಿ ಬಳಿ ಶುಕ್ರವಾರ ಮುಂಜಾನೆ ಮಹಿಳೆಯ ಶವ ಡಾಂಬಾರು ಡಬ್ಬದಲ್ಲಿ ಪತ್ತೆಯಾಗಿದೆ. ಸುಮಾರು 25ರಿಂದ 30 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಆಕೆಯ ಗುರುತು ಪತ್ತೆಯಾಗಿಲ್ಲ ಎಂದು ಹರಪನಹಳ್ಳಿ ಪೊಲೀಸರರು ಹೇಳಿದ್ದಾರೆ. ಬೇರೆ ಕಡೆಯಿಂದ ಅಪಹರಿಸಿ ತಂದು ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ರೌಡಿ ಶೀಟರ್ ಓಲೆರಾಮ ಸಾವು
ರೌಡಿಶೀಟರ್ ಓಲೆರಾಮ ಮತ್ತು ಆತನ ಸಹಚರನೊಬ್ಬ ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಜಕ್ಕೂರು ಕೆರೆಯಲ್ಲಿ ನಡೆದಿದೆ. ಗುರುವಾರ ಓಲೆ ರಾಮ (26) ಮತ್ತು ಆತನ ಸಹಚರ ತೇಜಸ್ (17) ಶವ ಜಕ್ಕೂರು ಕೆರೆಯಲ್ಲಿ ಪತ್ತೆಯಾಗಿದೆ. ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇವರು ಹಾವು ಕಂಡು ತೆಪ್ಪದಿಂದ ಕೆರೆಗೆ ಜಾರಿಬಿದ್ದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಬಂಧನಕ್ಕೆ ನನ್ನ ಅನುಮತಿ ಬೇಕಾಗಿಲ್ಲ
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುರೇಶ್ ಬಾಬು, ನಾಗೇಂದ್ರ, ಆನಂದ್ ಸಿಂಗ್ ಹಾಗೂ ಸತೀಶ್ ಸೈಲ್ ಅವರನ್ನು ಬಂಧಿಸಿಸಲು ನನ್ನ ಅನುಮತಿ ಬೇಕಾಗಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ವರು ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ. ಶಾಸಕರು ಸರ್ಕಾರಿ ಬಂಗಲೆಯಲ್ಲಿದ್ದರೆ ಅಥವ ಅಧಿವೇಶನ ನಡೆಯುತ್ತಿದ್ದರೆ, ಮಾತ್ರ ಸ್ಪೀಕರ್ ಅನುಮತಿ ಬೇಕು. ಈಗ ಅಧಿವೇಶನ ನಡೆಯುತ್ತಿಲ್ಲ. ಯಾವ ಶಾಸಕರು ಸರ್ಕಾರಿ ಬಂಗಲೆಗಳಲ್ಲಿ ವಾಸಿಸುತ್ತಿಲ್ಲ. ಆದ್ದರಿಂದ ನನ್ನ ಅನುಮತಿ ಅಗತ್ಯವಿಲ್ಲ ಎಂದು ಶಿವಮೊಗ್ಗದಲ್ಲಿ ಹೇಳಿದ್ದಾರೆ.












Click it and Unblock the Notifications