ಜೋಗ : ಮುಂಗಾರು ಮಳೆ ಸ್ಟಾಟ್ ಗೆ ತಡೆಗೋಡೆ
ಶಿವಮೊಗ್ಗ, ಸೆ.6 : ವಿಶ್ವಪ್ರಸಿದ್ಧ ಜೋಗ ಜಲಪಾತದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಜಲಪಾತದ ಮುಂಗಾರು ಮಳೆ ಸ್ಟಾಟ್ ಬಳಿ ಬೇಲಿ ಮತ್ತು ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಜೋಗ ನಿರ್ವಹಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಮುಂಗಾರು ಮಳೆ ಸ್ಟಾಟ್ ಬಳಿ ಪ್ರವಾಸಿಗರ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸುವಂತೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಒಪ್ಪಿಗೆ ನೀಡಿದ್ದಾರೆ. ಮುಂದಿನವಾರ ಕಾಮಗಾರಿ ಪ್ರಾರಂಭವಾಗಲಿದೆ.

ಆಗಸ್ಟ್ ನಲ್ಲಿ ಜೋಗದ ಮುಂಗಾರು ಮಳೆ ಸ್ಟಾಟ್ ನಿಂದ ಬಿದ್ದು ಮೂವರು ಪ್ರವಾಸಿಗರು ಸಾವನ್ನಪ್ಪಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಜೋಗ ನಿರ್ವಹಣಾ ಪ್ರಾಧಿಕಾರ ತಡೆಗೋಡೆ ನಿರ್ಮಿಸಿ, ಪ್ರವಾಸಿಗರು ಜಲಪಾತದ ಸಮೀಪ ಹೋಗದಂತೆ ತಡೆಯಲು ಮುಂದಾಗಿದೆ.
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಜಂಟಿಯಾಗಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಿವೆ. ಜಲಪಾತ ಎರಡೂ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವುದರಿಂದ ಆಯಾ ಜಿಲ್ಲೆಯಗಳ ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಸೆ.10ರಿಂದ ಪ್ರಾರಂಭವಾಗಲಿದೆ.
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಕಾಮಗಾರಿಯ ಸಂಪೂರ್ಣ ವಿವಿರ ಪಡೆದು ಒಪ್ಪಿಗೆ ನೀಡಿದ್ದಾರೆ. ಕಾಮಗಾರಿ ಪೂರ್ಣಗೊಂಡರೆ ಪ್ರವಾಸಿಗರ ರಕ್ಷಣೆಗೆ ಸೂಕ್ತ ವ್ಯವಸ್ಥೆ ದೊರಯಲಿದೆ.
ನಿಷೇಧವಿಲ್ಲ : ಪ್ರವಾಸಿಗರು ಮುಂಗಾರು ಮಳೆ ಸ್ಪಾಟ್ ನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದ ನಂತರ ಈ ಸ್ಥಳದಿಂದ ಜಲಪಾತ ವೀಕ್ಷಣೆಯನ್ನು ನಿಷೇಧಿಸಬೇಕು ಎಂಬ ಚರ್ಚೆಯೂ ನಡೆದಿತ್ತು. ಶಿವಮೊಗ್ಗ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದರು.
ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ಸಭೆಯಲ್ಲಿಯೂ ಈ ವಿಷಯದ ಕುರಿತು ಚರ್ಚೆ ನಡೆಯಿತು. ನಂತರ ಮುಂಗಾರು ಮಳೆ ಸ್ಟಾಟ್ ನಿಂದ ಜಲಪಾತ ವೀಕ್ಷಿಸುವುದನ್ನು ನಿಷೇಧಿಸುವುದು ಬೇಡ ತಡೆಗೋಡೆ ನಿರ್ಮಿಸೋಣ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮುಂಗಾರು ಮಳೆ ಸಿನಿಮಾದಲ್ಲಿ ಜೋಗ ಜಲಪಾತವನ್ನು ಬ್ರಿಟಿಷ್ ಬಂಗ್ಲೆ ಕಡೆಯಿಂದ (ಜಲಪಾತದ ಮೇಲ್ಭಾಗದಿಂದ) ಚಿತ್ರೀಕರಿಸಲಾಗಿತ್ತು. ಆ ನಂತರ ಈ ಭಾಗದಿಂದ ಜಲಪಾತ ವೀಕ್ಷಿಸಲು ಹೆಚ್ಚು ಮಂದಿ ಭೇಟಿ ನೀಡುತ್ತಿದ್ದು, ಜಾರಿ ಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು.












Click it and Unblock the Notifications