ಪೊಲೀಸ್ ದೌರ್ಜನ್ಯ ಪ್ರೇಮ ಪ್ರಕರಣ ಪ್ರಿಯಕರನ ತಂದೆ ಬಲಿ

ಹಿಂದಿನ ಸುದ್ದಿ: ಬೆಂಗಳೂರು ಸಿದ್ದಾಪುರ ಪೊಲೀಸರ ಅಟ್ಟಹಾಸಕ್ಕೆ ಮಡಿಕೇರಿಯ ವಯೋವೃದ್ಧರೊಬ್ಬರು ಬಲಿಯಾಗಿದ್ದಾರೆ.
ಮಡಿಕೇರಿ ಸಮೀಪದ ಮೂರ್ನಾಡುವಿನ ಟಿಎಸ್ ಸೋಮಶೇಖರ್ (73) ಮೃತಪಟ್ಟವರು. ದುರ್ದೈವ ಅಂದರೆ ಇಂದು ಬುಧವಾರ ಬೆಳಗಿನ ಜಾವ ಮೃತಪಟ್ಟ ಸೋಮಶೇಖರ್ ಅವರ ಅಂತ್ಯಕ್ರಿಯೆ ನೆರವೇರಿಸಲು ಪೊಲೀಸರು ಅಡ್ಡಿಯಾಗಿದ್ದು ಸೋಮಶೇಖರ್ ಅವರ ಏಕೈಕ ಪುತ್ರ ದೇವಿಪ್ರಸಾದ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಏನಾಯ್ತು: ಫೇಸ್ ಬುಕ್ ಮೂಲಕ ದೇವಿಪ್ರಸಾದ್ ಮತ್ತು ಬೆಂಗಳೂರಿನ ರಮ್ಯಾ ಎಂಬ ಯುವತಿಯ ಜತೆ ಲವ್ವಿಡವ್ವಿ ಶುರುವಾಗಿತ್ತು. ಅದು ಮದುವೆಯೂ ಆಗಿತ್ತು. ಇದಕ್ಕೆ ಯುವತಿ ಸಂಪೂರ್ಣ ಸಹಮತ ಹೊಂದಿದ್ದಳು. ಆದರೆ ಮುಂದೇನಾಯ್ತೋ ಯುವತಿಯ ತಂದೆ ಪೊಲೀಸ್ ಜಂಟಿ ಆಯುಕ್ತರೊಬ್ಬರ ಬಳಿ ವಾಹನ ಚಾಲಕರಾಗಿದ್ದಾರೆ.
ಆ ಪ್ರಭಾವ ಬಳಸಿ, ತಮ್ಮ ಮಗಳನ್ನು ಯಾವೋನೋ ಮಡಿಕೇರಿ ಹುಡುಗ ಅಪಹರಣ ಮಾಡಿ, ಮದುವೆಯಾಗಿಬಿಟ್ಟಿದ್ದಾನೆ. ಆದರೆ ನನಗೆ ಈ ಮದುವೆ ಬಗ್ಗೆ ಸುತರಾಂ ಇಷ್ಟವಿಲ್ಲ. ಹಾಗಾಗಿ ದಯವಿಟ್ಟು ನನ್ನ ಮಗಳನ್ನು ವಾಪಸ್ ತಂದುಕೊಡಿ ಎಂದು ಗೋಗರೆದಿದ್ದಾನೆ.
ಎಚ್ಚೆತ್ತ ಪೊಲೀಸ್ ಜಂಟಿ ಆಯುಕ್ತರು ಯುವತಿಯ ಮನೆಯಿರುವುದು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂದು ತಿಳಿದುಕೊಂಡು ನೇರವಾಗಿ ಸಿದ್ದಾಪುರ ಪೊಲೀಸರಿಗೆ ಫೋನ್ ಹಚ್ಚುತ್ತಾರೆ. 'ಹುಡುಗನನ್ನು ಸರಿಯಾಗಿ ವಿಚಾರಿಸಿಕೊಳ್ಳಿ' ಎಂದೂ ಆದೇಶಿಸಿದ್ದಾರೆ.
ಆಯುಕ್ತರಿಂದ ಬಂದಿರುವ ಆದೇಶ. ಸಿದ್ದಾಪುರ ಪೊಲೀಸರು ಹಿಂದೆ ಮುಂದೆ ವಿಚಾರಿಸದೆ ಸೀದಾ ಮಡಿಕೇರಿಯ ಮೂರ್ನಾಡುವಿಗೆ ಯುದ್ಧೋತ್ಸಾಹದಲ್ಲಿ ಮೊನ್ನೆ ಸೋಮವಾರ ದೌಡಾಯಿಸಿದ್ದಾರೆ.
ಅಲ್ಲಿ ನೇರವಾಗಿ ದೇವಿಪ್ರಸಾದ್ ಅವರ ಮನೆಗೆ ನುಗ್ಗಿದವರೆ ದೌರ್ಜನ್ಯ ನಡೆಸಿ, ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಸೊಸೆ ಮಗನೊಂದಿಗೆ ಖುಷಿಯಾಗಿದ್ದ ತಂದೆ ಸೋಮಶೇಖರ್ ಅವರಿಗೆ ಪೊಲೀಸರ ಅಟ್ಟಹಾಸ ಕಂಡು ಆಘಾತವಾಗಿದೆ. ಮಗನನ್ನು ಬಿಟ್ಟುಬಿಡಿ. ಅವನೇನೂ ತಪ್ಪು ಮಾಡಿಲ್ಲ ಎಂದು ಪೊಲೀಸರನ್ನು ಗೋಗರೆದಿದ್ದಾರೆ.
ಆದರೆ ಪೊಲೀಸರಿಗೆಲ್ಲಿಯ ವಿವೇಚನೆ? ಅದೂ ದೊಡ್ಡ ಸಾಹೇಬರು ಫೋನ್ ಮಾಡಿ ಆದೇಶಿಸಿರುವಾಗ? ಸರಿ ಅಡ್ಡಬಂದ 73 ವರ್ಷದ ಸೋಮಶೇಖರ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಸೋಮಶೇಖರ್ ಅವರಿಗೆ ಏನಾಯ್ತು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದ ಪೊಲೀಸರು ದೇವಿಪ್ರಸಾದನನ್ನು ಹಿಡಿದು ಬೆಂಗಳೂರಿಗೆ ತಂದಿದ್ದಾರೆ. ಮುಂದೆ ಆತನ ವಿರುದ್ಧ ಆಗಸ್ಟ್ 28ರಂದು Kidnap Case ಹಾಕಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ, ಪಾಪ ಕೋರ್ಟ್ ಏನು ಮಾಡುತ್ತದೆ. ಪೊಲೀಸರ case sheet ನೋಡಿಕೊಂಡು ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಕೊಟ್ಟಿಲ್ಲ.
ಆದರೆ ಈ ಮಧ್ಯೆ ಅತ್ತ ಮೂರ್ನಾಡುವಿನಲ್ಲಿ ಏನಾಯಿತು ಅಂದರೆ ಪೊಲೀಸರಿಂದ ತೀವ್ರವಾಗಿ ಹಲ್ಲೆಗೊಳಗಾಗಿ, ಆಘಾತಕ್ಕೊಳಗಾಗಿದ್ದ ಸೋಮಶೇಖರ್ ಅವರನ್ನು ಅಲ್ಲಿದ್ದವರೆ ಯಾರೋ ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ. ಆದರೆ ಇಂದು ಬುಧವಾರ ಬೆಳಗ್ಗೆ ಮಡಿಕೇರಿಯ ಮರ್ಕರ ನರ್ಸಿಂಗ್ ಹೋಂನಲ್ಲಿ ಸೋಮಶೇಖರ್ ಮೃತಪಟ್ಟಿದ್ದಾರೆ.
ತಾಯಿ ಸುನಂದಾ (65) ಅವರದು ಅರಣ್ಯರೋಧನವಾಗಿದೆ. ಮಗ ಇದ್ದೂ ಆತನಿಂದ ಅಂತ್ಯಕ್ರಿಯೆ ನೆರವೇರಿಸಿಕೊಳ್ಳದ ದೌರ್ಭಾಗ್ಯ ಸೋಮಶೇಖರ್ ಅವರದ್ದಾಗುತ್ತದಾ!? Over to Bangalore Siddapura police.












Click it and Unblock the Notifications