ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಮೇಲುಗೈ

ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಮತ್ತು ಪಕ್ಷೇತರ ಅಭ್ಯರ್ಥಿ ಜಿ.ರಘು ಆಚಾರ್ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ರಘು ಆಚಾರ್ 1,197 ಮತಗಳಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ವಿರುದ್ದ ಜಯಸಾಧಿಸಿದ್ದಾರೆ. ನವೀನ್ 1694 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಮೈಸೂರು : ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧರ್ಮಸೇನ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕೆಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದವು. ಆದರೆ, ಚುನಾವಣೆಯಲ್ಲಿ ಮೈತ್ರಿ ಯಾವುದೇ ಪ್ರಭಾವ ಬೀರಿಲ್ಲ. ಇದರಿಂದ ಬಿಜೆಪಿ ಮತ್ತು ಕೆಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ.
ಧಾರವಾಡ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡದಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಛಬ್ಬಿ ವಿರುದ್ಧ 43 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಕಾಂಗ್ರೆಸ್ ಸೋಲಿಸಲು ಬಿಜೆಪಿ ಮತ್ತು ಕೆಜೆಪಿ ಮೂರು ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದವು. ಆದರೆ, ಉಭಯ ಪಕ್ಷಗಳಿಗೂ ಮುಖಭಂಗ ಉಂಟಾಗಿದೆ. ಬಿಜೆಪಿ ವಿಧಾನಸಭೆ ಚುನಾವಣೆಯಂತೆ ಪರಿಷತ್ ಉಪ ಚುನಾವಣೆಯಲ್ಲಿಯೂ ಹೀನಾಯ ಸೋಲು ಕಂಡಿದೆ.
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮೈತ್ರಿ ಕೂಟ ನೆಲಕಚ್ಚಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಇದು ಮುಂದುವರೆದಿದ್ದು, ಕಾಂಗ್ರೆಸ್ ತನ್ನ ಗೆಲುವಿನ ಓಟ ಮುಂದುವರೆದಿದೆ.
ಮೂರು ಸ್ಥಾನಗಳಿಗೆ ಆ.22ರಂದು ನಡೆದ ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಗ್ಗೆ 8 ಗಂಟೆಗೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭವಾಯಿತು. ಚುನಾವಣೆಗೆ ಮತಯಂತ್ರಗಳ ಬದಲು ಮತ ಪತ್ರಗಳನ್ನು ಬಳಸಿದ್ದರಿಂದ ಫಲಿತಾಂಶ ದೊರೆಯುವುದು ವಿಳಂಭವಾಯಿತು.
ಧಾರವಾಡ ಮತ್ತು ಚಿತ್ರದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಕೆಜೆಪಿ ಬೆಂಬಲ ವ್ಯಕ್ತಪಡಿಸಿತ್ತು. ಮೈಸೂರು ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡಿತ್ತು. ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ಜೆಡಿಎಸ್ ಈ ಎರಡೂ ಪಕ್ಷಗಳನ್ನು ಬೆಂಬಲಿಸಿ, ಉಪಚುನಾವಣೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ.
ದಾಖಲೆ ಮತದಾನ : ಆ.22ರ ಗುರುವಾರದಂದು ನಡೆದ ಪರಿಷತ್ ಉಪ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಶೇ.98.21, ಧಾರವಾಡ ಜಿಲ್ಲಾ ಕ್ಷೇತ್ರದಲ್ಲಿ ಶೇ.99.59 ಹಾಗೂ ಚಿತ್ರದುರ್ಗ ಕ್ಷೇತ್ರದಲ್ಲಿ ಶೇ.99.66 ರಷ್ಟು ಮತದಾನವಾಗಿತ್ತು.
ಅಭ್ಯರ್ಥಿಗಳು : ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಮತ್ತು ಕಾಂಗ್ರೆಸ್ ನಿಂದ ನಾಗರಾಜ್ ಛಬ್ಬಿ ಕಣಕ್ಕಿಳಿದಿದ್ದರು. ಶೆಟ್ಟರ್ ತಮ್ಮ ಸಹೋದರನನ್ನು ಗೆಲ್ಲಿಸುವುದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿ, ಕೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಎಸ್.ನವೀನ್ ಮತ್ತು ಕಾಂಗ್ರೆಸ್ ಪಕ್ಷದ ಎಂ.ಎ.ಸೇತೂರಾಮ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಕ್ಷೇತರರಾಗಿ ಜಿ.ರಘು ಆಚಾರ್ ಕ್ಷೇತ್ರದಲ್ಲಿ ಕಣದಲ್ಲಿದ್ದರು.
ಮೈಸೂರು ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿ ಯು.ಎಸ್.ಶೇಖರ್ ಮತ್ತು ಕಾಂಗ್ರೆಸ್ ನ ಆರ್.ಧರ್ಮಸೇನ ನಡುವೆ ಹಣಾಹಣಿ ಏರ್ಪಟಿದ್ದು, ಅಯೂಬ್ ಖಾನ್ ಪಕ್ಷೇತರರಾಗಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.












Click it and Unblock the Notifications