ಬಿಸಿಯೂಟ: ಸಾಂಬಾರು ಪಾತ್ರೆಯಲ್ಲಿ ಬೆಂದ ಬಾಲಕಿ

ಬುಡಕಟ್ಟು ಜನಾಂಗದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 8 ವರ್ಷದ ಬನಿತಾ ಕನ್ಹರ್ ಕುದಿಯುತ್ತಿದ್ದ ಸಾಂಬಾರು ಪಾತ್ರೆಯೊಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ.
ಗಿರೀಶ್ಚಂದ್ರಾಪುರ ಗ್ರಾಮದಲ್ಲಿ ರಾಜ್ಯ ಸರಕಾರದ ಸೇವಾಶ್ರಮ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದಳು. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಮೊಟ್ಟೆ ಸಾಂಬಾರು ಬಡಿಸುತ್ತಿರುವಾಗ ನೂಕುನುಗ್ಗಲು ಉಂಟಾದಾಗ ಬನಿತಾ ಸಾಂಬಾರು ಪಾತ್ರೆಯೊಳಕ್ಕೆ ಬಿದ್ದುಬಿಟ್ಟಳು.
ಮೊದಲು ಬಾಲಕಿಯನ್ನು ಬುರ್ಲಾದ ವಿಎಸ್ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಕುದಿಯುತ್ತಿದ್ದ ಸಾಂಬಾರು ಪಾತ್ರೆಯಲ್ಲಿ ಆಕೆ ಸುಮಾರು ಕಾಲ ಬಿದ್ದಿದ್ದಳು. ಹಾಗಾಗಿ, ಶೇ. 70ರಷ್ಟು ತೀವ್ರ ಸುಟ್ಟ ಗಾಯಗಳಾಗಿದ್ದ ಕಾರಣ ಬನಿತಾಳನ್ನು ಅಲ್ಲಿಂದ ಕಟಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಿನ್ನೆ ಸಂಜೆ ಆಕೆ ಅಸುನೀಗಿದ್ದಾಳೆ.
ವಸತಿ ಶಾಲೆಯಲ್ಲಿ 323 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಘಟನೆಯ ನಂತರ ಎಚ್ಚೆತ್ತ ಜಿಲ್ಲಾಡಳಿತ ಗಿರೀಶ್ಚಂದ್ರಾಪುರದಲ್ಲಿ ಸಮುದಾಯ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿಯೂ ಮತ್ತು ಮೃತ ಬಾಲಕಿಯ ತಾಯಿಯನ್ನು ಇದೇ ವಸತಿ ಶಾಲೆಯಲ್ಲಿ ಅಡುಗೆ ಕೆಲಸದಾಳಾಗಿ ನೇಮಿಸಿಕೊಳ್ಳುವುದಾಗಿಯೂ ಪ್ರಕಟಿಸಿದೆ.
ಬಿಹಾರದ ಶರಣ್ ಜಿಲ್ಲೆಯ ಮಶ್ರಖ್ ಎಂಬ ಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಒಂದು ತಿಂಗಳ ಹಿಂದೆ 25ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದರು.












Click it and Unblock the Notifications