ಅವಿರೋಧವಾಗಿ ರಾಜ್ಯಸಭೆಗೆ ಬಿ.ಕೆ.ಹರಿಪ್ರಸಾದ್ ಆಯ್ಕೆ

ರಾಜ್ಯಸಭೆ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್, ಡಾ.ಕೆ.ಪದ್ಮರಾಜನ್ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಬಿಜೆಪಿ ಮತ್ತು ಜೆಡಿಎಸ್ ನಿಂದ ಯಾವ ಅಭ್ಯರ್ಥಿಗಳು ಸ್ಪರ್ಧಿಸಿರಲಿಲ್ಲ.
ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಓಂ ಪ್ರಕಾಶ್ ಅವರು ಟಿ.ಜೆ.ಅಬ್ರಾಹಂ ಮತ್ತು ಕೆ.ಪದ್ಮರಾಜನ್ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಹೇಳಿದ್ದಾರೆ. ಇದರಿಂದ ಹರಿಪ್ರಸಾದ್ ಒಬ್ಬರೇ ಕಣದಲ್ಲಿ ಉಳಿದಿದ್ದಾರೆ.
ಆ.29ರಂದು ರಾಜ್ಯಸಭೆ ಉಪ ಚುನಾವಣೆ ನಡೆಯಬೇಕಾಗಿತ್ತು. ಬಿ.ಕೆ.ಹರಿಪ್ರಸಾದ್ ಮಾತ್ರ ಕಣದಲ್ಲಿ ಉಳಿದಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ಕುರಿತು ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಇದೆ.
ಸೂಚಕರ ಸಹಿ ಇರಲಿಲ್ಲ : ಪದ್ಮರಾಜನ್ ಅವರು ಸಲ್ಲಿಸಿದ್ದ ನಾಮಪತ್ರಕ್ಕೆ ಸೂಚಕರ ಹೆಸರು ಮತ್ತು ಸಹಿ ಇರಲಿಲ್ಲ. ಟಿ.ಜೆ.ಅಬ್ರಹಾಂ ಅವರ ನಾಮಪತ್ರಕ್ಕೆ ಐವರು ಶಾಸಕರು ಮಾತ್ರ ಸೂಚಕರಾಗಿದ್ದರು. ಆದ್ದರಿಂದ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುಣಾವಣಾಧಿಕಾರಿ ಓಂ ಪ್ರಕಾಶ್ ಹೇಳಿದ್ದಾರೆ.
ಗುರುವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಅಂದು ಹರಿಪ್ರಸಾದ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಲಿದ್ದಾರೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಅನಿಲ್ಲಾಡ್ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ರಾಜ್ಯಸಭೆ ಚುನಾವಣೆಗೆ ವಿಧಾನಸಭೆ ಸದಸ್ಯರು ಮತದಾನ ಮಾಡಬೇಕಾಗಿತ್ತು. ವಿಧಾನಸಭೆಯಲ್ಲಿ ಕಾಂಗ್ರೆಸ್ 122 ಸದಸ್ಯಬಲ ಹೊಂದಿದ್ದು ಕಾಂಗ್ರೆಸ್ ಅಭ್ಯರ್ಥಿ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸುವುದು ಖಚಿತವಾಗಿತ್ತು. ಆದ್ದರಿಂದಲೇ ವಿರೋಧ ಪಕ್ಷಗಳು ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿ ಕಣದಲ್ಲಿ ಒಬ್ಬರು ಅಭ್ಯರ್ಥಿಗಳು ಮಾತ್ರ ಉಳಿದಿದ್ದಾರೆ.












Click it and Unblock the Notifications