ವಿಚಾರವಾದಿ ನರೇಂದ್ರರನ್ನು ಕೊಂದವರು ಯಾರು?
ಪುಣೆ, ಆ.21: ಮೂಢನಂಬಿಕೆ ವಿರೋಧಿ ಕಾರ್ಯಕರ್ತ, ಪತ್ರಕರ್ತ ನರೇಂದ್ರ ಧಾಬೋಲ್ಕರ್ ಅವರನ್ನು ಮಂಗಳವಾರ ಬೆಳಗಿನ ಜಾವ ಪುಣೆಯಲ್ಲಿ ಹತ್ಯೆಗೈಯಲಾಗಿದೆ. ನರೇಂದ್ರ ಅವರ ಹತ್ಯೆ ಖಂಡಿಸಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಪುಣೆಯಲ್ಲಿ ಬುಧವಾರ ಸ್ವಯಂಘೋಷಿತ ಬಂದ್ ಆಚರಿಸಲಾಗುತ್ತಿದೆ.
ನರೇಂದ್ರ ಅವರು ಹುಟ್ಟು ಹಾಕಿದ ಸಾಮಾಜಿಕ ಕಳಕಳಿ ಸಂಘಟನೆ, ಸಿಪಿಐ(ಎಂ), ಸಿಐಟಿಯು ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ನರೇಂದ್ರ ಅವರ ಹತ್ಯೆ ಖಂಡಿಸಿ ಪುಣೆ, ನಾಸಿಕ್ ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿವೆ. ನಡುರಸ್ತೆಯಲ್ಲಿ ನರೇಂದ್ರ ಅವರು ಹತ್ಯೆ ಮಾಡಿದವರ ಸುಳಿವು ನೀಡಿದವರಿಗೆ 10 ಲಕ್ಷ ರು ಇನಾಮು ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.
ಬುಧವಾರ ಪುಣೆಯಲ್ಲಿ ಆಟೋರಿಕ್ಷಾಗಳು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ತನಕ ಸಂಚಾರ ಸ್ಥಗಿತಗಿಳಿಸಿವೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಆಸ್ಪತ್ರೆ, ಶಾಲಾ, ಕಾಲೇಜು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡೆಸಿ ಉಳಿದೆಲ್ಲವೂ ಬಂದ್ ಗೆ ಸಹಕಾರಿಯಾಗಿ ನಿಂತಿವೆ.

69 ವರ್ಷ ವಯಸ್ಸಿನ ಧಾಬೋಲ್ಕರ ಅವರು ಬೆಳಗ್ಗೆ ವಾಕಿಂಗ್ ಹೋಗುತ್ತಿರುವ ವೇಳೆ ಮೋಟರ್ ಸೈಕಲ್ ನಲ್ಲಿ ಬಂದ ಅಜ್ಞಾತ ಬಂದೂಕುಧಾರಿಗಳು ಓಂಕಾರೇಶ್ವರ ಸೇತುವೆ ಬಳಿ 4 ಸುತ್ತು ಗುಂಡಿಕ್ಕಿ ಕೊಂದಿದ್ದಾರೆ. ಮೂಢನಂಬಿಕೆ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇ ಇವರ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಹತ್ಯೆಗಾರರು ನೀಲಿ ಹಾಗೂ ಬೂದು ಬಣ್ಣದ ಚೆಕ್ಸ್ ಶರ್ಟ್ ಧರಿಸಿದ್ದರು. ಕಪ್ಪು ಬಣ್ಣದ ಸ್ಪ್ಲೆಂಡರ್ ವಾಹನದಲ್ಲಿ ಬಂದಿದ್ದರು. ವಯಸ್ಸು ಸುಮಾರು 26 ವರ್ಷ ಇರಬಹುದು. 5 ಅಡಿ 7 ಎತ್ತರ ಇರುವ ಸಾಧ್ಯತೆಯಿದೆ.
ಗಲ್ಲದ ಹತ್ತಿರ ಮಚ್ಚೆಯಂಥ ಗುರುತು ಇತ್ತು ಎಂದು ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಹಾಗೂ ಹತ್ತಿರದ ಸಿಸಿಟಿವಿ ಕೆಮೆರಾ ವಿಡಿಯೋ ತುಣುಕು ಆಧಾರದ ಮೇರೆಗೆ ಪೊಲೀಸರು ಸ್ಕೆಚ್ ತಯಾರಿಸಿ ಬಿಡುಗಡೆ ಮಾಡಲಾಗಿದೆ. ಹತ್ಯೆಯ ಉದ್ದೇಶ, ಹತ್ಯೆಗೈದವರು ಯಾರು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಪುಣೆ ಪೊಲೀಸ್ ಆಯುಕ್ತ ಗುಲಾಬ್ ರಾವ್ ಪೊಲ್ ಹೇಳಿದ್ದಾರೆ.

ಮೂಢನಂಬಿಕೆ, ನಕಲಿ ಬಾಬಾಗಳ ವಿರುದ್ಧ ಸಮರ ಸಾರಿದ್ದ ನರೇಂದ್ರ ಅವರು ಮೂಢನಂಬಿಕೆ ವಿರೋಧಿ ಕಾಯ್ದೆ, ಮಾಟ ಮಂತ್ರ ನಿಗ್ರಹ ಕಾಯ್ದೆ ಜಾರಿಗೆ ತರುವಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದ ಮಹಾರಾಷ್ಟ್ರ ಸರ್ಕಾರ ಈ ರೀತಿ ಕಾನೂನು ಅವಶ್ಯವಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿತ್ತು.
ಅಂಧಶ್ರದ್ಧಾ ನಿರ್ಮೂಲನ್ ಸಮಿತಿ ರಚಿಸಿ ಯುವ ಜನಾಂಗದಲ್ಲಿ ಹೊಸ ಚೇತನ ಮೂಡಿಸಿದ್ದರು. ಜನ ಜಾಗೃತಿ ಅಭಿಯಾನ ಹಮ್ಮಿಕೊಂಡು ಜನಪ್ರಿಯತೆ ಕೂಡಾ ಗಳಿಸಿದ್ದರು. ಸಾಧನಾ ಎಂಬ ಮ್ಯಾಗಜೀನ್ ಸಂಪಾದಕರಾಗಿದ್ದರು.












Click it and Unblock the Notifications