ನಿತೀಶ್ ಜೆಡಿಯು ಸಭೆಗಳಲ್ಲಿ ತುಂಡುಡುಗೆಯ ಲಲನೆಯರು!

ಕಾರ್ಯಕರ್ತರು ಪಕ್ಷದ ಸಾರ್ವಜನಿಕ ಸಭೆಗಳಲ್ಲಿ ವಿರಳವಾಗುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಜೆಡಿಯು ಈ ತಂತ್ರಕ್ಕೆ ಮೊರೆಹೋಗಿದೆ. ಕಳೆದ ಭಾನುವಾರ ನಾನಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಅನೇಕ ಸಭೆಗಳಲ್ಲಿ ತುಂಡುಡುಗೆಯ ಲಲನೆಯರು ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
ಬಿಜೆಪಿ ಜತೆ ಸಂಬಂಧ ಕಳೆದುಕೊಂಡ ಮೇಲೆ ಕಾರ್ಯಕರ್ತರು/ಸಾರ್ವಜನಿಕರು ಜೆಡಿಯು ಪಕ್ಷದ ಸಭೆಗಳತ್ತ ಮುಖ ಹಾಕುತ್ತಿಲ್ಲ. ಹಾಗಾಗಿ ಆಡಳಿತಾರೂಢ ಪಕ್ಷವು ಮುಂದೆಯೂ ವಿಶೇಷ ಮನರಂಜನೆ ಒದಗಿಸಲು ಆಲೋಚಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭಾನುವಾರದ ಸಭೆಯಲ್ಲಿ ಸಚಿವರು, ಶಾಸಕರು, ಪಕ್ಷದ ಸಾಮಾನ್ಯ ಕಾರ್ಯಕರ್ತರು ಪಾಲ್ಗೊಂಡಿದ್ದ ಸಭೆಯಲ್ಲಿ ಅರ್ಥಪೂರ್ಣ/ಮಹತ್ವದ ಚರ್ಚೆಗಳು ನಡೆಯದೆ ಚೀಪ್ ಗಿಮಿಕ್ ಗೆ ಮೊರೆಹೋಗಿದ್ದಾರೆ ಎಂದು ಬಿಹಾರದ ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.
ಆದರೆ ಇದನ್ನು ಅಲ್ಲಗಳೆದಿರುವ ಜೆಡಿಯು ಮುಖಂಡರು 'ಪತ್ರಿಕೆಗಳು ತಪ್ಪಾಗಿ ವರದಿ ಮಾಡಿವೆ. ಯಾವುದೇ ನೃತ್ಯ ಕಾರ್ಯಕ್ರಮಗಳು ನಡೆಯಲಿಲ್ಲ. ಪ್ರತಿಪಕ್ಷಗಳು ತಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿವೆ' ಎಂದು ಕಿಡಿಕಾರಿದ್ದಾರೆ.
ಬಾರಾ, ರುಪಾಲಿ, ಬಿಹಾರ್ ಷರೀಫ್, ರುನಿಸೈದಾಪುರ, ಆಕಂನಗರ, ಕುರ್ಹಿಣಿ, ಮಾಂಜ್ಹಿ, ಕರಗಹಾರ್, ದರುಂದಾ, ತ್ರಿವೇಣಿಗಂಜ್ ಮತ್ತು ದರ್ಬಾಂಗಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಹ ಇತ್ತೀಚೆಗೆ ಇಂತಹ ಸಭೆಗಳನ್ನು ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.












Click it and Unblock the Notifications