ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ
ಬೆಂಗಳೂರು, ಆ.20 : ಸೋಮೇಶ್ವರ ನಗರದಲ್ಲಿ ಸೋಮವಾರ ಕುಸಿದು ಬಿದ್ದ ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಕಟ್ಟಡ ದುರಂತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ತಡರಾತ್ರಿವರೆಗೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳನ್ನು ಹೊರತೆಯಲಾಗಿದೆ.
ಅಗ್ನಿಶಾಮಕದಳ ಮತ್ತು ಬಿಬಿಎಂಪಿ ಸಿಬ್ಬಂದಿ ಸೋಮವಾರ ತಡರಾತ್ರಿವರೆಗೂ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು. ರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಮಹಿಳೆಯ ಶವ ಮಂಗಳವಾರ ಬೆಳಗ್ಗೆ ದೊರಕಿದೆ.

ಕಟ್ಟಡ ದುರಂತದಲ್ಲಿ ಮೃತಪಟ್ಟ ಕಾರ್ಮಿಕರನ್ನು ರಾಯಚೂರು ಜಿಲ್ಲೆ ಸುಲ್ತಾನ್ ಪುರ ನಿವಾಸಿ ನಾಗಮ್ಮ (50), ಒಡಿಶಾದ ನೇಪಾಲ್ ಪಾಸ್ವಾನ್ ಮತ್ತು ಪಶ್ಚಿಮ ಬಂಗಾಳಾದ ನಿರಂಜನ್ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿಯ ವೇಳೆಗೆ ಪಾಸ್ವಾನ್ ಮತ್ತು ನಿರಂಜನ್ ಮೃತದೇಹ ಪತ್ತೆಯಾಗಿತ್ತು. ಮಂಗಳವಾರ ಬೆಳಗ್ಗೆ ನಾಗಮ್ಮ ಅವರ ಶವ ಪತ್ತೆಯಾಗಿದ್ದು, ಕಟ್ಟಡದ ಅಡಿ ಯಾವುದೇ ಕಾರ್ಮಿಕರು ಸಿಲುಕಿಕೊಂಡಿಲ್ಲ ಎಂದು ಸಿದ್ದಾಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಟ್ಟಡ ಕುಸಿತ ಪ್ರಕರಣದಲ್ಲಿ ಗಾಯಗೊಂಡ 10 ಮಂದಿ ಕಾರ್ಮಿಕರು ನಿಮ್ಹಾನ್ಸ್ ಮತ್ತು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಟ್ಟಡದ ಮಾಲೀಕ ಸಮೀರ್ ವುಲ್ಲಾ ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಟ್ಟಡ ತೆರವು : ಮಂಗಳವಾರ ಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಕಟ್ಟಡ ತೆರವುಗೊಳಿಸುವ ವೇಳೆ ಅವಶೇಷಗಳು ಕಟ್ಟಡದ ಮನೆಗಳ ಮೇಲೆ ಬಿದ್ದು, ಒಬ್ಬರು ಗಾಯಗೊಂಡಿದ್ದಾರೆ. (ಯಮಸ್ವರೂಪಿ ಕಟ್ಟಡ ಹೇಗಿದೆ ಗೊತ್ತಾ?)
ಎಲ್ಲಾ ಮನೆ ಮಾರಾಟವಾಗಿತ್ತು : 6 ಅಂತಸ್ತಿನ ಎಲ್ಲಾ ಮನೆಗಳನ್ನು ಮಾಲೀಕ ಸಮೀರ್ ವುಲ್ಲಾ ಮಾರಾಟ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕಟ್ಟಡದಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು,10 ರಿಂದ 25 ಲಕ್ಷದ ವರೆಗೆ ದರ ನಿಗದಿಗೊಳಿಸಿ ಎಲ್ಲಾ ಮನೆಗಳನ್ನು ಮಾರಾಟ ಮಾಡಲಾಗಿತ್ತು ಎಂದು ತಿಳಿದುಬಂದಿದೆ.












Click it and Unblock the Notifications