ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿದ ನರೇಂದ್ರ ಮೋದಿ
ನವದೆಹಲಿ, ಆ.19 : ಲೋಕಸಭೆ ಚುನಾಣೆಯಲ್ಲಿ ಎಲ್ಲಾ ವರ್ಗದವರು ಬಿಜೆಪಿಯನ್ನು ಬೆಂಬಲಿಸುವಂತೆ ಮಾಡಬೇಕು. ಮುಸ್ಲಿಂ ಮತದಾರರು ಬಿಜೆಪಿ ಬೆಂಬಲಿಸಿ ಮತ ನೀಡುವಂತೆ ಕಾರ್ಯತಂತ್ರ ರೂಪಿಸಬೇಕು ಎಂದು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪ್ರಚಾರ ಸಮಿತಿಯ ಮಹತ್ವದ ಸಭೆಯಲ್ಲಿ, ಬಿಜೆಪಿ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಕುರಿತು ಮೋದಿ ಸಲಹೆ ನೀಡಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ನೇಮಿಸಿದ 20 ಉಪ ಸಮಿತಿಗಳು ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡಬೇಕು. ಸಮಗ್ರ ಯೋಜನೆಗಳನ್ನು ಸಿದ್ಧಪಡಿಸಬೇಕು. 200 ದಿನಗಳಲ್ಲಿ ಪಕ್ಷ ಹೊಸ ಹುರುಪಿನಲ್ಲಿರಬೇಕು ಎಂದು ನರೇಂದ್ರ ಮೋದಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಪ್ರಧಾನಿ ಅಭ್ಯರ್ಥಿ ನಿರ್ಣಯವಿಲ್ಲ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಯಾವ ರಾಜ್ಯ ಘಟಕಗಳು ನಿರ್ಣಯ ತೆಗೆದುಕೊಳ್ಳಬಾರದು ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ಅಭ್ಯರ್ಥಿಯಾರು ಎಂಬ ನಿರ್ಣಯವನ್ನು ಪಕ್ಷದ ಸಂಸದೀಯ ಮಂಡಳಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ರಾಜ್ಯಗಳು ಮೋದಿ ಪ್ರಧಾನಿ ಅಭ್ಯರ್ಥಿ ಎಂಬ ನಿರ್ಣಯ ಮಂಡಿಸಿ, ಪಕ್ಷದ ಕಚೇರಿಗೆ ಕಳಿಸಬಾರದು ಎಂದು ತಿಳಿಸಿದ್ದಾರೆ.
ಯುವಕರನ್ನು ಸೆಳೆಯಿರಿ : ದೇಶದಲ್ಲಿನ ಯುವಕರು ಹಾಗೂ ಮೊದಲ ಬಾರಿಗೆ ಮತಚಲಾಯಿಸುವವರು ಬದಲಾವಣೆಗೆಗಾಗಿ ಕಾಯುತ್ತಿದ್ದಾರೆ. ಇಂಥ ವರ್ಗದ ಜನರನ್ನು ಸೆಳೆಯಲು ಹೆಚ್ಚಿನ ಆದ್ಯತೆ ನೀಡುವಂತೆ ಮೋದಿ ಚುನಾವಣಾ ಪ್ರಚಾರದ ಉಪ ಸಮಿತಿಗಳಿಗೆ ತಿಳಿಸಿದ್ದಾರೆ.
272+ ಗುರಿ : ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸ್ಥಾನ ಗಳಿಸುವ ಗುರಿಯನ್ನು ಇಟ್ಟುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಪಕ್ಷವನ್ನು ಬೂತ್ ಮಟ್ಟದಲ್ಲೇ ಬಲಪಡಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. (ಇಂಡಿಯಾ272+ : ಅಂತರ್ಜಾಲದಲ್ಲಿ ಬಿಜೆಪಿ ಭರ್ಜರಿ ಅಭಿಯಾನ)
ದಕ್ಷಿಣ ಭಾರತ ಟಾರ್ಗೆಟ್ : ಹೈದರಾಬಾದ್ ನಲ್ಲಿ ಆಯೋಜಿಸಿದಂತಹ ಯಶಸ್ವಿ ಸಮಾವೇಶಗಳನ್ನು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಆಯೋಜಿಸಿ, ಮತದಾರರನ್ನು ಸೆಳೆಯಲು ಯೋಜನೆ ತಯಾರಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ದೇಶದ ತುಂಬಾ ಇರುವ ಯುಪಿಎ ವಿರೋಧಿ ಅಲೆಯನ್ನು ಬಳಸಿಕೊಂಡು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಂದು ರಾಜ್ಯಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಎಲ್ಲಾ ರಾಜ್ಯಾಧ್ಯಕ್ಷರಿಗೆ ನಿರ್ದೇಶನ ನೀಡಿದ್ದಾರೆ.











Click it and Unblock the Notifications