ಬಿಹಾರದಲ್ಲಿ ರೈಲು ದುರಂತ : 35 ಸಾವು
ಬಿಹಾರ, ಆ.19 : ಬಿಹಾರದ ಸಹರ್ಸಾ ಜಿಲ್ಲೆಯ ಧಮಾರಾ ರೈಲು ನಿಲ್ದಾಣದ ಬಳಿ ಸೋಮವಾರ ಸಂಭವಿಸಿದ ರೈಲು ದುರಂತದಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ಕೋಪಗೊಂಡ ಜನರು ರೈಲು ಚಾಲಕನಿಗೆ ಥಳಿಸಿ, ರೈಲಿಗೆ ಬೆಂಕಿ ಹಚ್ಚಿದ್ದಾರೆ.
ಸೋಮವಾರ ಬೆಳಗ್ಗೆ ಸಹರ್ಸಾದಿಂದ ಪಾಟ್ನಾಕ್ಕೆ ಹೊರಟಿದ್ದ ಸಹರ್ಸಾ ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು, ಧಮಾರಾ ರೈಲು ನಿಲ್ದಾಣದಲ್ಲಿ ಮತ್ತೊಂದು ರೈಲು ಏರುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾತ್ಯಾನಿ ಶಿವನ ದರ್ಶನಕ್ಕೆ ತೆರಳುತ್ತಿದ್ದ 35 ಭಕ್ತರು ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ರೈಲಿನ ಚಕ್ರಕ್ಕೆ ಸಿಲುಕಿ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು.

ಗಂಭೀರವಾಗಿ ಗಾಯಗೊಂಡ 15 ಭಕ್ತರು ನಂತರ ಸಹರ್ಸಾ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿಲ್ದಾಣದ ಸಮೀಪ ಮಂದವಾದ ಬೆಳಕು ಇದ್ದಿದ್ದರಿಂದ ಭಕ್ತಾದಿಗಳನ್ನು ರೈಲಿನ ಚಾಲಕ ಗುರುತಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಜನರು ರೈಲಿನ ಚಾಲಕನಿಗೆ ಥಳಿಸಿ ರೈಲಿಗೆ ಬೆಂಕಿ ಹಚ್ಚಿದರು. ಜನರಿಂದ ಪೆಟ್ಟುತಿಂದು ಗಾಯಗೊಂಡು ಆಸ್ಪತ್ರೆ ಸೇರಿದ್ದ ಚಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಮಾರ್ಗದ ಎಲ್ಲಾ ರೈಲು ಸಂಚಾರವನ್ನು ಇಲಾಖೆ ರದ್ದು ಪಡಿಸಿದೆ. ಘಟನೆಯ ನಂತರ ಜನರ ಆಕ್ರೋಶಕ್ಕೆ ತುತ್ತಾದ ರೈಲ್ವೆ ನಿಲ್ದಾಣದ ಸಿಬ್ಬಂದಿ ಅಲ್ಲಿಂದ ಓಡಿಹೋಗಿದ್ದರು. ಜಿಲ್ಲಾಕೇಂದ್ರದಿಂದ ಧಮಾಪುರ ರೈಲು ನಿಲ್ದಾಣ ದೂರವಿದ್ದ ಕಾರಣ ಭದ್ರತಾ ಸಿಬ್ಬಂದಿ ಅಲ್ಲಿಗೆ ತಲುಪುವುದು ವಿಳಂಬವಾಗಿದೆ.
ಪ್ರಯಾಣಿಕರ ತಪ್ಪು : ಬೇರೆ ರೈಲನ್ನು ಏರುವ ಭರದಲ್ಲಿ ಪ್ರಯಾಣಿಕರು ಅಕ್ರವಾಗಿ ರೈಲ್ವೆ ಹಳಿ ದಾಟುತ್ತಿದ್ದರು. ಈ ಸಂರ್ಭದಲ್ಲಿ ಬಂದ ರೈಲು ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ನಿಲ್ದಾಣದ ಹಿರಿಯ ಅಧಿಕಾರಿ ಅರುಣೇಂದ್ರ ಕುಮಾರ್ ಹೇಳಿದ್ದಾರೆ. ಧಮಾಪುರ ರೈಲು ನಿಲ್ದಾಣ ಸಮಷ್ಟಿಪುರ ವಿಭಾಗಕ್ಕೆ ಸೇರಿದ್ದು ರಾಜಧಾನಿ ಪಾಟ್ನಾದಿಂದ ಸುಮಾರು 200 ಕಿ.ಮೀ.ದೂರದಲ್ಲಿದೆ.
ತನಿಖೆಗೆ ಆದೇಶ : ಧಮಾರಾ ರೈಲು ನಿಲ್ದಾಣದಲ್ಲಿ ನಡೆದಿರುವ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ಸೂಕ್ತ ಪರಿಹಾರ ವಿತರಿಸುವ ಭರವಸೆ ನೀಡಿದ್ದಾರೆ.












Click it and Unblock the Notifications