ಸಿದ್ದರಾಮಯ್ಯ ಕಾಂಗ್ರೆಸ್ಸಿನ ಮೋದಿ: ಅಂಬರೀಷ್ ಡೈಲಾಗ್
ಮಂಡ್ಯ, ಆಗಸ್ಟ್ 19: ಮಂಡ್ಯ ಲೋಕಸಭಾ ಉಪಚುನಾವಣೆ ನಿಮಿತ್ತ ಬಹಿರಂಗ ಪ್ರಚಾರ ಅಂತ್ಯವಾಗಲು ಕೆಲವೇ ಕ್ಷಣಗಳು ಬಾಕಿಯಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಹೋಲಿಸಿ ಕೃತಾರ್ಥರಾಗಿದ್ದಾರೆ.
'ನನ್ನ ನಾಲಿಗೆ ಮೇಲೆ ಮಚ್ಚೆ ಇದೆ. ನಾನು ಹೇಳಿದ್ದು ನಿಜವಾಗುತ್ತದೆ' ಎಂದೂ ಹಿರಿಯ ನಟ, ಮಂಡ್ಯದ ಗಂಡು ಒಕ್ಕಣೆ ಸೇರಿಸಿದ್ದಾರೆ. ವೀರಪ್ಪ ಮೊಯ್ಲಿ, ಬಾಬುರಾವ್ ಚಿಂಚನಸೂರು, ಆತ್ಮಾನಂದ ಮುಂತಾದ ಗಣ್ಯರ ಸಮ್ಮುಖದಲ್ಲಿ ಅಂಬರೀಷ್ ಈ ಡೈಲಾಗ್ ಹೊಡೆದಿರುವುದು ಗಮನಾರ್ಹ.

ಅಂಬರೀಷ್ ಅವರು ಇಂದು ಸೋಮವಾರ ಕೆಆರ್ ನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ನಟಿ ರಮ್ಯಾ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೋದಿಯಲ್ಲಿ ಸಿದ್ದರಾಮಯ್ಯ ಕಂಡ ಅಂಬಿ: ಆ ವೇಳೆ ಆವೇಶಕ್ಕೊಳಗಾದವರಂತೆ ಕಂಡುಬಂದ ಅಂಬರೀಷ್ ಅವರು 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿದ್ದಂತೆ. ಸಿದ್ದರಾಮಣ್ಣನನ್ನು ದೇಶವೆಲ್ಲಾ ಸುತ್ತಿಸುತ್ತೇವೆ' ಎಂದು ಗೂಡಾರ್ಥದಲ್ಲಿ ಹೇಳಿದರು.
'ನಾನು ಮೊದಲೇ ಹೇಳಿದ್ದೆ. ಸಿದ್ರಾಮಣ್ಣ ಮುಖ್ಯಮಂತ್ರಿ ಆಗ್ತಾರೆ ಅಂತ. ನೋಡಿ ಅವರು ಮುಖ್ಯಮಂತ್ರಿಯಾಗಿ ಜನೋಪಯೋಗಿ ಕೆಲಸಗಳಲ್ಲಿ ತೊಡಗಿದ್ದಾರೆ. ನನ್ನ ನಾಲಿಗೆಯ ಮೇಲೆ ಮಚ್ಚೆ ಇದೆ. ನಾನು ಹೇಳಿದ್ದು ಸತ್ಯವಾಗುತ್ತದೆ' ಎಂದು ಅಂಬರೀಷ್ ಇತ್ತೀಚೆಗಷ್ಟೇ ಪ್ರಚಾರ ಸಭೆಯೊಂದರಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಒಂದು ಕಡೆಯಿಂದ ಕಾಂಗ್ರೆಸ್ ಪಕ್ಷದವರು ನರೇಂದ್ರ ಮೋದಿಯನ್ನು ವಾಚಾಮಗೋಚರವಾಗಿ ಖಂಡಿಸುತ್ತಾ, ಅವರನ್ನು ವಿರೋಧಿಸುತ್ತಿರುವಾಗ ಒಬ್ಬ ಅಂಬರೀಷ್ ಮಾತ್ರ ಮೋದಿಯಲ್ಲಿ ಸಿದ್ದರಾಮಯ್ಯಮನವರನ್ನು ಕಂಡಿರುವುದು ಸೋಜಿಗವೇ!












Click it and Unblock the Notifications